ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಶಂಕರ ಭಾರತಿ ಮಠದಲ್ಲಿ ಬ್ರಹ್ಮವೃಂದದ ವತಿಯಿಂದ ಬುಧವಾರ ಶ್ರೀರಾಮನ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.
ಶ್ರೀಮಠದಲ್ಲಿ ಸೇರಿದ್ದ ಸುಮಂಗಲೆಯರು ಶ್ರೀರಾಮ ಸ್ವರೂಪಿ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಭಕ್ತಿಯಿಂದ ತೂಗಿ ರಾಮನಾಮದ ಭಕ್ತಿಗೀತೆ ಹಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆ.ಮೂ. ಬಾಲಚಂದ್ರಭಟ್ ಹುಲಮನಿ, ಧರ್ಮ ಸಂಸ್ಥಾಪನೆಗಾಗಿ ಮರ್ಯಾದಾ ಪುರುಷೋತ್ತಮನಾಗಿ ಅವತಾರವೆತ್ತಿದ ಶ್ರೀರಾಮ ಸಾಕ್ಷಾತ್ ದೇವರೇ ಆಗಿದ್ದಾನೆ. ಸೂರ್ಯವಂಶಸ್ಥನಾದ ಶ್ರೀರಾಮನು ಕಾಲಾತೀತ, ಗುಣಾತೀತನಾಗಿದ್ದು, ಶ್ರೀರಾಮನೇ ಮೂಲವಾಗಿರುವ ರಾಮಾಯಣದ ಪ್ರಸಂಗಗಳು ಬದುಕಿಗೆ ಆದರ್ಶವಾಗಿವೆ. ಶ್ರೀರಾಮ ಎಲ್ಲರ ಬದುಕಿಗೂ ಆದರ್ಶ ಮತ್ತು ಪೂಜನೀಯವಾಗಿದ್ದು, ಶ್ರೀರಾಮ ನಾಮ ಜಪದಿಂದ ಕಷ್ಟಗಳು ಪರಿಹಾರವಾಗಿ ಸುಖ-ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದರು.
ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ, ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಿಮಿತ್ತ ಇಲ್ಲಿನ ಬ್ರಾಹ್ಮಣ ಸಮಾಜ ಒಂದು ಕೋಟಿ ರಾಮನಾಮ ತಾರಕ ಮಂತ್ರದ ಜಪಯಜ್ಞವನ್ನು ಯಶಸ್ವಿಯಾಗಿ ನೆರವೇರಿಸಿದ್ದು ಎಲ್ಲರ ಗಮನ ಸೆಳೆಯುವಂತಾಗಿತ್ತು. ಬ್ರಾಹ್ಮಣ ಸಮಾಜದ ಜೊತೆ ಇತರೆ ಎಲ್ಲ ಸಮಾಜ ಬಾಂಧವರು ಅಂದಿನ ರಾಮತಾರಕ ಯಜ್ಞವನ್ನು ಯಶಸ್ವಿಗೊಳಿಸಲು ಸಹಕರಿಸಿದ್ದು, ಅದೇ ರೀತಿ ಇಂದು ಶ್ರೀರಾಮ ನವಮಿಯನ್ನು ಸಂಪ್ರದಾಯದಂತೆ ಆಚರಿಸಲಾಗಿದೆ ಎಂದರು.