
ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಗುರುಗಳ ಕೃಪೆಯೊಂದಿದ್ದರೆ, ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದೆಂದು ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ಸನ್ಮಾರ್ಗ ಪ.ಪೂ ಮಹಾವಿದ್ಯಾಲಯದಲ್ಲಿ ಜರುಗಿದ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂರ್ವಾಶ್ರಮದಲ್ಲಿ ಬೇಡಕುಲದಲ್ಲಿ ಜನಿಸಿದ ಶ್ರೀ ವಾಲ್ಮೀಕಿ ಮಹರ್ಷಿಗಳು ಅಕ್ಷರಸ್ಥರಲ್ಲ. ಪಂಡಿತರೂ ಅಲ್ಲ. ಅಂತಹ ಸಾಮಾನ್ಯ ವ್ಯಕ್ತಿ ಮಹರ್ಷಿ ನಾರದ ಗುರುಗಳ ದರ್ಶನ ಭಾಗ್ಯದಿಂದ, ಗುರುಕೃಪೆಯಿಂದ ವಿಶ್ವ ಪೂಜ್ಯನೀಯವಾದ ರಾಮಾಯಣ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ರಚಿಸಿ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆಯನ್ನು ನೀಡಿದರು. ಇದಕ್ಕೆಲ್ಲಾ ಕಾರಣ ಗುರು ಕೃಪೆ. ನಮ್ಮ ಬಾಳಿಗೆ ಬೆಳಕು ತೋರುವ ಅಂತಹ ಗುರುಗಳನ್ನು ನಿತ್ಯ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಹೇಳಿದರು.
ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ಗುರು ಕರುಣೆಯಾದಾಗ ಮಾತ್ರ ನಾವು ಜೀವನದಲ್ಲಿ ಗಹನವಾದುದನ್ನು ಸಾಧಿಸಬಹುದು ಎಂಬುದನ್ನು ಮಹರ್ಷಿ ಶ್ರೀ ವಾಲ್ಮೀಕಿಯವರ ಜೀವನದ ಹಲವಾರು ಪ್ರಸಂಗಗಳನ್ನು ಹೇಳಿದರು.
ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಪ್ರೊ. ಮುರಲೀಧರ ಸಂಕನೂರ ಮಾತನಾಡುತ್ತಾ, ವಾಲ್ಮೀಕಿ ಋಷಿಗಳ ಜೀವನ ಚರಿತ್ರೆಯನ್ನು, ವಾಲ್ಮೀಕಿ ಶಬ್ದದ ಅರ್ಥ ವಿವರಣೆಯನ್ನು ತಿಳಿಸಿದರು. ಮಹಾವಿದ್ಯಾಲಯದ ಆಡಳಿತಾಧಿಕಾರಿ ಎಮ್.ಸಿ. ಹಿರೇಮಠರ ನೇತೃತ್ವದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಪ್ರೊ. ರಾಹುಲ ಒಡೆಯರ್, ಪ್ರೊ. ರೋಹಿತ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ಸೈಯ್ಯದ್ ಮತೀನ್ ಮುಲ್ಲಾ, ಕಾಲೇಜಿನ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.