ವಿಜಯಸಾಕ್ಷಿ ಸುದ್ದಿ, ಗದಗ: ಮನೆಯಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ಜಂಪಣ್ಣ ಮಲ್ಲಪ್ಪ ಪೂಜಾರ ಎಂಬಾತ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅಬಕಾರಿ ಪೊಲೀಸರು, ಸಣ್ಣ ಸಣ್ಣ ಪ್ಲಾಸ್ಟಿಕ್ ಪೌಚ್ಗಳಲ್ಲಿ ತುಂಬಿದ್ದ ಸುಮಾರು 15ಸಾವಿರ ರೂ. ಮೌಲ್ಯದ 600 ಗ್ರಾಮ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಎನ್.ಡಿ.ಪಿ.ಎಸ್. ಕಾಯ್ದೆ 1985ರ 8(c)ರ ಅಡಿಯಲ್ಲಿ 20(b)(ii)(A) ಮತ್ತು 25ರ ಅನ್ವಯ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೆ ಗಾಂಜಾ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟ ಮನೆ ಮಾಲೀಕನ ಮೇಲೂ ಅಬಕಾರಿ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.
ಬೆಳಗಾವಿ ಅಬಕಾರಿ ಜಾರಿ ಮತ್ತು ತನಿಖಾ ಅಪರ ಆಯುಕ್ತರ ಹಾಗೂ ಹೊಸಪೇಟೆ ಜಂಟಿ ಆಯುಕ್ತರ ನಿರ್ದೇಶನದಲ್ಲಿ ಗದಗ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕರಾದ ಭೀಮಣ್ಣ ರಾಠೋಡ್ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ, ಉಪ ನಿರೀಕ್ಷಕರಾದ ಆಶಾರಾಣಿ, ಮುಖ್ಯ ಪೇದೆಗಳಾದ ಗುರುರಾಜ್ ವಸ್ತ್ರದ, ನಜೀರಸಾಬ್ ಖುದಾವಂದ್, ಅಂಬೋಜಿ ಹಾಳಕೇರಿ, ವಾಹನ ಚಾಲಕರಾದ ರಮೇಶ್ ಬೆಣಗಿ ಈ ಕಾರ್ಯಾಚರಣೆಯಲ್ಲಿ ಇದ್ದರು.