ಅರ್ಜೆಂಟೀನಾ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಗೋಟ್ ಇಂಡಿಯಾ ಟೂರ್ನ ಭಾಗವಾಗಿ, ಇಂದು ಮೆಸ್ಸಿ ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ಹೊರಗೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆ ಬಳಿಕ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ ಕಾಣಿಸಿಕೊಂಡರು. ಆದರೆ, ಕೇವಲ 10 ನಿಮಿಷಗಳ ನಂತರ ಮೆಸ್ಸಿ ಮೈದಾನದಿಂದ ತೆರಳಿದ್ದರು.
ಇದರಿಂದ, ಟಿಕೆಟ್ ಖರೀದಿಸಿ ಮೆಸ್ಸಿಯನ್ನು ವೀಕ್ಷಿಸಲು ಕಾಯುತ್ತಿದ್ದ ಅಭಿಮಾನಿಗಳು ನಿರಾಸೆಯಾಗಿ, ಕೋಪದಿಂದ ಮೈದಾನಕ್ಕೆ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದ್ದರು. ಸ್ಥಳದಲ್ಲಿದ್ದ ಬ್ಯಾರಿಕೇಡ್ಗಳನ್ನು ಮುರಿದು, ಕೆಲವು ಅಭಿಮಾನಿಗಳು ಮೈದಾನದಲ್ಲಿ ಹುಚ್ಚಾಟ ಮೆರೆದಿದ್ದಾರೆ.
ಬ್ಯಾರಿಕೇಡ್ಗಳನ್ನು ಮುರಿದು ಮೈದಾನಕ್ಕೆ ನುಗಿದ್ದ ಅಭಿಮಾನಿಗಳು ದಾಂಧಲೆ ಆರಂಭಿಸಿದ್ದು, ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇದೀಗ ಪೊಲೀಸರು ಸ್ಟೇಡಿಯಂನಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುತ್ತಿದ್ದಾರೆ.



