ವಿಜಯಸಾಕ್ಷಿ ಸುದ್ದಿ, ನರೇಗಲ್ : ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಎಲ್ಲರಿಗೂ ಅವಶ್ಯಕ. ಕಂಪ್ಯೂಟರ್ ಜ್ಞಾನ ಇಲ್ಲದವನನ್ನು ನಿರಕ್ಷರಿ ಎಂದು ಭಾವಿಸಲಾಗುತ್ತದೆ. ಅದಕ್ಕಾಗಿ ಎಲ್ಲರೂ ಈ ಜ್ಞಾನವನ್ನು ಹೊಂದುವುದು ಅವಶ್ಯಕವಾಗಿದೆ ಎಂದು ಎಸ್.ಎ. ಪಿಯು ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಹೇಳಿದರು.
ಪಟ್ಟಣದ ಸೈಬರ್ಟೆಕ್ ಕಂಪ್ಯೂಟರ್ ಕೇಂದ್ರದಿಂದ ತರಬೇತಿ ಪಡೆದ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಂಪ್ಯೂಟರ್ ಕಲಿಕೆಯಿಂದ ನಾನಾ ಉದ್ಯೋಗಗಳಲ್ಲಿ ತೊಡಗಲು ಅನುಕೂಲವಾಗಲಿದೆ. ಖಾಸಗಿ ಸೇರಿದಂತೆ ನಾನಾ ಉದ್ಯೋಗಗಳಿಗೆ ಹೋಗಲು ಕಂಪ್ಯೂಟರ್ ಜ್ಞಾನ ಮತ್ತು ಅನುಭವದ ಬಗ್ಗೆ ಕೇಳುವುದು ಸಹಜ. ಈಗ ತರಬೇತಿ ಪಡೆದ ನೀವೆಲ್ಲರೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿರಿ ಎಂದು ಹೇಳಿದರು.
ಪತ್ರಕರ್ತ ಮಲ್ಲಯ್ಯ ಗುಂಡಗೋಪುರಮಠ ಮಾತನಾಡಿ, ಇಂದು ಯಾವುದೇ ಒಂದು ಸಣ್ಣ-ಪುಟ್ಟ ಕಚೇರಿಯಲ್ಲಿ ಉದ್ಯೋಗ ಮಾಡಬೇಕೆಂದರೂ ಕಂಪ್ಯೂಟರ್ ಜ್ಞಾನದ ಬಗ್ಗೆ ಕೇಳಲಾಗುತ್ತದೆ. ಆದರೆ ಪಿಯುಸಿ ನಂತರ ಶಿಕ್ಷಣ ತೊರೆದವರು ಸಾಮಾನ್ಯವಾಗಿ ಆರ್ಥಿಕ ಸಂಕಷ್ಟದಿಂದ ಮುಂದೆ ಹೋಗುವುದಿಲ್ಲ. ಅವರಿಗಾಗಿ ಉಚಿತ ಕಂಪ್ಯೂಟರ್ ತರಬೇತಿ ಒಂದು ಪ್ರಕಲ್ಪವಾಗಿದೆ. ಆದ್ದರಿಂದ, ಉಚಿತ ಕಂಪ್ಯೂಟರ್ ತರಬೇತಿ ಪಡೆದುಕೊಂಡವರೆಲ್ಲರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಎಂದರು.
ಶಿಕ್ಷಕ ವಿ.ಕೆ. ಸಂಗನಾಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಸವರಾಜ ಮಡಿವಾಳರ, ಜಯಕಾಂತ ನರಗುಂದ, ಅಂದಯ್ಯ ಹಿರೇಮಠ, ಸಿದ್ದು ನವಲಗುಂದ, ರವಿ ಬಿಸನಳ್ಳಿ, ತೋಟಯ್ಯ, ಮನೋಜ ಇದ್ದರು. ರಕ್ಷಿತಾ ಪಾಟೀಲ ಸ್ವಾಗತಿಸಿದರು. ಸಂಗೀತಾ ಪಾಟೀಲ ನಿರೂಪಿಸಿದರು. ನಿರ್ಮಲಾ ವಂದಿಸಿದರು.



