ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರು ಉತ್ತಮ ಮಳೆಯಾಗಲೆಂದು ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿದರು.
ಗ್ರಾಮದ ಮಹಿಳೆಯರು ತಲೆಯ ಮೇಲೆ ಗುರ್ಜಿ ಹೊತ್ತು, “ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ… ಕಾರ ಮಳೆಯೋ, ಕಪ್ಪತ್ತ ಮಳೆಯೋ…” ಎಂದು ಜಾನಪದ ಹಾಡುಗಳನ್ನು ಹಾಡುತ್ತ ಮನೆ ಮನೆಗೆ ತೆರಳಿ ಮಳೆಗಾಗಿ ಪ್ರಾರ್ಥಿಸಿದರು.
ಸಗಣಿಯಿಂದ ತಯಾರಿಸಿದ ಗುರ್ಜಿಯನ್ನು ಹೆಂಚಿನ ಮೇಲೆ ಇಟ್ಟು ಗ್ರಾಮದ ಮನೆಗಳಿಗೆ ಕೊಂಡೊಯ್ಯಲಾಯಿತು. ಗುರ್ಜಿ ಮನೆ ಎದುರು ಬಂದಾಗ ಮನೆಯವರು ಹೆಂಚಿನ ಮೇಲೆ ನೀರು ಸುರಿದು ಮಳೆಯ ಸಂಕೇತವಾಗಿ ಪೂಜೆ ಸಲ್ಲಿಸಿ ದವಸ-ಧಾನ್ಯವನ್ನು ಕಾಣಿಕೆಯಾಗಿ ನೀಡಿದರು.
ಸಂಗ್ರಹವಾದ ದವಸ-ಧಾನ್ಯವನ್ನು ಮಾರಾಟ ಮಾಡಿ ಬಂದ ಹಣದಿಂದ ಚುರುಮರಿ ಖರೀದಿಸಿ ದೇವಸ್ಥಾನದಲ್ಲಿ ಎಲ್ಲರೂ ಪ್ರಸಾದ ಸ್ವೀಕರಿಸಿದರು. ಈ ಜಾನಪದ ಆಚರಣೆ ಗ್ರಾಮಸ್ಥರಲ್ಲಿ ಸಾಮರಸ್ಯ, ಸಹಕಾರ ಹಾಗೂ ಪ್ರಕೃತಿಯ ಮೇಲಿನ ಭಕ್ತಿಗೆ ಸಾಕ್ಷಿಯಾಯಿತು.
ಪೂಜೆಯಲ್ಲಿ ಬಸಪ್ಪ ಹಂಜಿ, ಶಿವಪ್ಪ ಕೆಸರಳ್ಳಿ, ರಾಜು ಮುಳಗುಂದ, ಎನ್.ಎನ್. ನೆಗಳೂರ, ಶ್ರೀಧರ ಜನಿವಾರದ, ವಿಷ್ಣಪ್ಪ ಮಾಳೋದಿ ಸೇರಿದಂತೆ ಅನೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು.



