ವಿಜಯಸಾಕ್ಷಿ ಸುದ್ದಿ, ಗದಗ : ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಯ ಮೇಲೆ ಕೇಂದ್ರ ಸರ್ಕಾರ ನಡೆಸಿರುವ ಫ್ಯಾಸಿಸ್ಟ್ ದಾಳಿಯನ್ನು ಖಂಡಿಸಿ, ಭಾರತ ಡಬ್ಲ್ಯೂ.ಟಿ.ಓ.ದಿಂದ ಹೊರ ಬರಲು ಒತ್ತಾಯಿಸಿ ದೇಶಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದ್ದರಿಂದ, ಸಂಯುಕ್ತ ಹೋರಾಟ ಕರ್ನಾಟಕ ಎಸ್.ಕೆ.ಎಮ್, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವಿ.ಆರ್. ನಾರಾಯಣರೆಡ್ಡಿ ಬಣ್ಣದ ಕರೆಯ ಮೇರೆಗೆ ತಿಮ್ಮಾಪೂರ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಂಜಿನ ಪ್ರತಿಭಟನಾ ಮೆರವಣಿಗೆ, ಬಹಿರಂಗ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ದ್ವೇಷದ ಕೋಮುವಾದಿ ರಾಜಕೀಯದಲ್ಲಿ ಪ್ರಾಣ ಕಳೆದುಕೊಂಡ ಬಿಜೆಪಿಯ ಕಾರ್ಯಕರ್ತರಿಗೆ ತಲಾ 20ರಿಂದ 50 ಲಕ್ಷ ರೂ ಪರಿಹಾರ ಕೊಡುವ ಕೇಂದ್ರ ಸರ್ಕಾರ, ದೆಹಲಿಯ ಐತಿಹಾಸಿಕ ರೈತರ ಚಳುವಳಿಯಲ್ಲಿ ಪ್ರಾಣ ಅರ್ಪಿಸಿದ 780 ರೈತರ ಕುಟುಂಬಕ್ಕೆ ಯಾವುದೇ ಪರಿಹಾರ ಕೊಟ್ಟಿಲ್ಲ. ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ. ರೈತರ ಸಾಲ ಮನ್ನಾ ಮಾಡಿಲ್ಲ, ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ ಹಾಗೂ ಉದ್ಯೋಗ ಖಾತ್ರಿ ಕೂಲಿಯನ್ನು ಕೊಡುತ್ತಿಲ್ಲ.
ಈ ಎಲ್ಲ ಬೆಳವಣಿಗೆಗಳಿಂದ ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಪರಿಹರಿಸುವ ಮನಸ್ಸಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಸರ್ಕಾರದ ಫ್ಯಾಸಿಸ್ಟ್ ನೀತಿಯ ವಿರುದ್ಧ ದೇಶದ ಜನರು ಬೀದಿಗಿಳಿಯಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಜೋಗಿನ, ಹನುಮಪ್ಪ ತಳವಾರ, ಉದಯ ಗಂಗರಾತ್ರಿ, ಮಾರುತಿ ಕೊಪದ್ದ, ಹೇಮಂತ ಉಚಿಡಿ, ಗಣೇಶ ಅಕ್ಕಸಾಲಿ, ಬಸವರಾಜ ಬಂಟಗೌಡ್ರ, ಫಕೀರಪ್ಪ ಗುಡ್ಲಾನೂರ, ಮಂಜುನಾಥ ಗಂಗರಾತ್ರಿ, ಸುರೇಶ ಹಳ್ಳಿಕೇರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.