ಖಾಸಗಿ ವಿದ್ಯತ್ ಕಂಪನಿಗಳ ಹಾವಳಿ: ಲೋಕಾಯುಕ್ತರಿಗೆ ದೂರು ಸಲ್ಲಿಸಿದ ರೈತರು

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ಖಾಸಗಿ ವಿದ್ಯುತ್ (ವಿಂಡ್ ಫ್ಯಾನ್) ಕಂಪನಿಗಳ ಹಾವಳಿ ಹೆಚ್ಚಿದ್ದು, ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರಶ್ನಿಸಿದರೆ ನಮ್ಮ ಮೆಲೆಯೇ ದೌರ್ಜನ್ಯ ನಡೆಸುತ್ತಾರೆ ಎಂದು ರಾಜೂರು, ದಿಂಡೂರ, ಗಜೇಂದ್ರಗಡ, ಕೊಡಗಾನೂರ, ಚಿಲ್‌ಝರಿ, ಉಣಚಗೇರಿ, ಗೋಗೇರಿ ಗ್ರಾಮದ ರೈತರು ಲೋಕಾಯುಕ್ತಾಧಿಕಾರಿ ವಿಜಯ ಬಿರಾದರರಿಗೆ ಮನವಿ ಸಲ್ಲಿಸಿದರು.

Advertisement

ಬುಧವಾರ ತಹಸೀಲ್ದಾರ ಕಚೇರಿಯ ಆಹಾರ ವಿಭಾಗದ ಸಭಾಂಗಣದಲ್ಲಿ ಜರುಗಿದ ತಾಲೂಕಾ ಸಾರ್ವಜನಿಕ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ನೂರಾರು ರೈತರು ಲೋಕಾಯುಕ್ತ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರು.

ಪ್ರತಿ ಗ್ರಾಮಗಳಲ್ಲಿ ವೀಣಾ ಮತ್ತು ಕ್ಷೇಮಾ ಎಂಬ ಖಾಸಗಿ ಕಂಪನಿಗಳು ರೈತರ ಜಮೀನುಗಳಲ್ಲಿ ಹೈವೋಲ್ಟೇಜ್ ತಂತಿ ಜೊತೆಗೆ ಕಂಬಗಳನ್ನು ನೆಡುತ್ತಿದ್ದಾರೆ. ಅಲ್ಲದೆ ಗ್ರಾಮದ ಕೆಲ ರೈತರಿಗೆ ದೊಡ್ಡ ಮೊತ್ತದ ಹಣವನ್ನು ನೀಡಿ ಅವರ ಜಮೀನುಗಳಲ್ಲಿ ಕಂಬ ಹಾಕಲು ಪರವಾನಿಗೆ ಪಡೆಯುತ್ತಾರೆ. ನಂತರ ಸಣ್ಣ ಜಮೀನಿಗಳ ರೈತರಿಗೆ ತಿಳಿಸದೆ ಜಮೀನುಗಳಲ್ಲಿ ಕಂಬ ನೆಡುತ್ತಾರೆ. ಇದನ್ನು ಪ್ರಶಿಸಿದರೆ ನಮ್ಮ ಮೇಲೆ ದೌರ್ಜನ್ಯವೆಸಗುತ್ತಾರೆ. ಮುಖ್ಯವಾಗಿ ತಹಸೀಲ್ದಾರ ಮತ್ತು ಪೊಲೀಸ್ ಇಲಾಖೆ ರೈತರ ನೆರವಿಗೆ ಬರುವ ಬದಲು ಕಂಪನಿಗಳ ಪರವಾಗಿ ನಿಂತು ರೈತರಿಗೆ ಬೆದರಿಕೆ ಹಾಕುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ರೈತರ ಸಮಸ್ಯೆ ಆಲಿಸಿದ ಡಿವಾಯ್‌ಎಸ್ಪಿ ವಿಜಯ ಬಿರಾದರ, ದೂರನ್ನು ಸ್ವೀಕರಿಸಿ ನಮ್ಮ ವ್ಯಾಪ್ತಿಗೆ ಒಳಪಡುವ ವಿಷಯಗಳಿದ್ದರೆ ನಿಮಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅಲ್ಲದೆ ತಹಸೀಲ್ದಾರ ಹಾಗೂ ಪೊಲೀಸ್ ಇಲಾಖೆಯ ನಡೆಯ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ದೂರನ್ನು ಸಹ ದಾಖಲಿಸಲಾಗುವುದು. ರೈತರ ಪರವಾನಿಗೆ ಇಲ್ಲದೆ ಯಾವುದೇ ಕಂಪನಿಗಳು ಏನೂ ಮಾಡುವಂತಿಲ್ಲ. ಈ ಕುರಿತು ಕಂಪನಿಗಳಿಗೆ ನೋಟಿಸ್ ನೀಡಿ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.

ರೋಣ ಪಟ್ಟಣದ ಹೃದಯ ಭಾಗದಲ್ಲಿರುವ ಕರೆಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳ ತಂಡ ಕೆರೆಯ ಗಲೀಜನ್ನು ಕಂಡು ಪುರಸಭೆ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಶಾಲವಾದ ಕೆರೆಯಿದೆ, ಅದನ್ನು ಪ್ರವಾಸಿ ತಾಣವಾಗಿ ಮಾಡಬಹುದು. ಆದರೆ ಅಲ್ಲಿ ತೆರಳಲು ಹಿಂಜರಿಕೆಯಾಗುತ್ತಿದೆ. ಕೆರೆಯನ್ನು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರಮೇಶ ಹೊಸಮನಿ, ಈಗಾಗಲೇ 1 ಕೋಟಿ 60 ಲಕ್ಷ ರೂ ವೆಚ್ಚದಲ್ಲಿ ಸದರಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನು 40 ಲಕ್ಷ ರೂಗಳ ಕೆಲಸ ಬಾಕಿ ಉಳಿದಿದೆ. ಶೀಘ್ರವೇ ಕೆರೆ ಹಾಗೂ ಪರಿಸರವನ್ನು ಸ್ವಚ್ಛಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಿಪಿಐ ಪರಮೇಶ್ವರ ಕವಟಗಿ, ತಹಸೀಲ್ದಾರ ನಾಗರಾಜ ಕೆ, ತಾ.ಪಂ ಇಒ ಚಂದ್ರಶೇಖರ ಕಂದಕೂರ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಲೆ, ವಸತಿ ನಿಲಯ, ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಆರೋಗ್ಯ ಇಲಾಖೆಯವರು ಮಕ್ಕಳ ತೂಕ, ಎತ್ತರ ಇತ್ಯಾದಿಗಳನ್ನು ಪರೀಕ್ಷಿಸಿ ಮಕ್ಕಳ ಆರೋಗ್ಯದ ಕುರಿತು ತಪಾಸಣೆ ನಡೆಸಬೇಕು. ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಶಿಕ್ಷಣಾಧಿಕಾರಿಗಳು ಮಕ್ಕಳ ಕಲಿಕೆಯ ಬಗ್ಗೆ ನಿಗಾವಹಿಸಿ ಮಾಹಿತಿ ಪಡೆದುಕೊಳ್ಳಬೇಕು.

– ಪರಮೇಶ್ವರ ಕವಟಗಿ.

ಲೋಕಾಯುಕ್ತ ಸಿಪಿಐ, ಗದಗ.


Spread the love

LEAVE A REPLY

Please enter your comment!
Please enter your name here