ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕು ಎಂದು ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟದಿಂದ 18 ದಿನಗಳ ಕಾಲ ನಡೆಸಿದ ಧರಣಿ ಸತ್ಯಾಗ್ರಹಕ್ಕೆ ಜಯ ಸಿಕ್ಕ ಹಿನ್ನೆಲೆನಲ್ಲಿ ಹೋರಾಟಕ್ಕೆ ಬೆಲೆಕೊಟ್ಟ ಸರ್ಕಾರ ಮತ್ತು ಪಕ್ಷಾತೀತ, ಜಾತ್ಯಾತೀತವಾಗಿ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಗುರುವಾರ ಲಕ್ಷ್ಮೇಶ್ವರದಲ್ಲಿ ನಡೆಯಿತು.
ಈ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಮಾಗಡಿ ಮತ್ತು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಲಕ್ಷ್ಮೇಶ್ವರದಲ್ಲಿ ನಡೆಸಿದ 18 ದಿನಗಳ ಹೋರಾಟದ ಫಲವಾಗಿ ರೈತ ಸಮುದಾಯ ರಾಜ್ಯಾದ್ಯಂತ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆಯಲಾಯಿತು. ರೈತರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ಪ್ರಾರಂಭದಲ್ಲಿ ಪ್ರತಿ ರೈತರಿಂದ 5 ಕ್ವಿಂಟಲ್ ಖರೀದಿಸಲು ಒಪ್ಪಿಗೆ ನೀಡಿದ್ದನ್ನು ವಿರೋಧಿಸಿದ ಪರಿಣಾಮ, ನಂತರ 20 ಕ್ವಿಂಟಲ್, ಬಳಿಕ 50 ಕ್ವಿಂಟಲ್ ಖರೀದಿಗೆ ಅಧಿಸೂಚನೆ ಹೊರಡಿಸಿರುವುದು ಅಭಿನಂದನೀಯ. ಇದು ರೈತ ಒಗ್ಗಟ್ಟಿನ ಹೋರಾಟಕ್ಕಿರುವ ಶಕ್ತಿಯನ್ನು ಸಾಕ್ಷೀಕರಿಸುತ್ತದೆ.
ರೈತ ಹೋರಾಟ ವೇದಿಕೆಯಲ್ಲಿ 18 ದಿನಗಳ ಕಾಲ ಪೂಜಿಸಲ್ಪಟ್ಟ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರರ ಭಾವಚಿತ್ರಕ್ಕೆ ಅಪಚಾರ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇಂತಹ ಕೆಟ್ಟ ಮನೋಭಾವ, ಕೆಟ್ಟ ಮನಸ್ಥಿತಿ ರೈತರದ್ದಲ್ಲ. ಉಪವಾಸ ನಿರತ ಅನಾರೋಗ್ಯ, ವಯಸ್ಸಾದ ರೈತ ಹೋರಾಟಗಾರನೋರ್ವ ಖುರ್ಚಿ ಮೇಲೆ ಕಾಲು ಇಟ್ಟುಕೊಂಡು ಕುಳಿತ ಸಂದರ್ಭದಲ್ಲಿ ಅಚಾತುರ್ಯದಿಂದ ಖುರ್ಚಿಯ ಮೇಲೆ ಕಾಲೆತ್ತಿಕೊಂಡು ಕುಳಿತಿದ್ದಾರೆ. ಈ ಘಟನೆ ಆಗಬಾರದಿತ್ತು ಅದಕ್ಕಾಗಿ ಪ್ರಾಂಜಲ ಮನಸ್ಸಿನಿಂದ ಕ್ಷಮೆ ಕೋರುತ್ತೇವೆ. ಈ ವಿಷಯವನ್ನು ಬೆಳೆಸುವುದು ಬೇಡ ಎಂದು ಮನವಿ ಮಾಡುತ್ತೇವೆ. ಮನುಕುಲದ ಮಹಾಬೆಳಕಾದ ಅಂಬೇಡ್ಕರರು ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ ಬ್ರಹ್ಮಾಸ್ತಗಳನ್ನು ಬಡವರ, ದೀನದಲಿತರ, ರೈತರ, ಸಮಾಜದ ಏಳಿಗಾಗಿ ಬಳಸೋಣ ಎಂದರು.
ಈ ವೇಳೆ ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು, ಕುಂದಗೋಳದ ಬಸವಣ್ಣಜ್ಜನವರು, ಬಟಗುರ್ಕಿ, ಜಮಖಂಡಿ ಶ್ರೀಗಳು, ಪೂರ್ಣಾಜಿ ಖರಾಟೆ, ಹೊನ್ನಪ್ಪ ವಡ್ಡರ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ಮಹೇಶ ಲಮಾಣಿ, ಅಶೋಕಗೌಡ ಪಾಟೀಲ, ನಾಗರಾಜ ಚಿಂಚಲಿ, ದಾದಾಪೀರ ಮುಚ್ಚಾಲೆ, ಬಸವಣ್ಣೆಪ್ಪ ನಂದೆಣ್ಣವರ, ನೀಲಪ್ಪ ಶರಸೂರಿ, ಅಮರಪ್ಪ ಗುಡಗುಂಟಿ, ನಾಗೇಶ ಅಮರಾಪುರ ಸೇರಿ ಅನೇಕ ರೈತ ಮುಖಂಡರು, ಸಂಘಟನೆಯವರು ಇದ್ದರು.
ರೈತರದ್ದು ರೈತ ಜಾತಿ. ರೈತರು ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೇರಿರುವುದಿಲ್ಲ. 18 ದಿನಗಳ ಕಾಲ ರೈತರು ಹೋರಾಟ ನಡೆಸಿದ ಸಂದರ್ಭದಲ್ಲಿ ಅನೇಕ ಮಠಾಧೀಶರು, ರೈತ ಮತ್ತು ಕನ್ನಡಪರ ಸಂಘಟನೆಗಳು, ವ್ಯಾಪಾರಸ್ಥರು, ಮಾಧ್ಯಮದವರು, ಕಂದಾಯ, ಪೊಲೀಸ್, ಆರೋಗ್ಯ, ಪುರಸಭೆ ಮುಂತಾದವರ ಸಹಕಾರ ಸ್ಮರಣೀಯ. 3 ದಿನ ನೋಂದಣಿ ಬಳಿಕ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೇಳಿದ ಸರ್ಕಾರ 8 ದಿನ ಕಳೆದರೂ ಖರೀದಿ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಇದಕ್ಕಾಗಿ ಮತ್ತೆ ಹೋರಾಟಕ್ಕಿಳಿಸಬೇಡಿ ಎಂದು ಮುಖಂಡರು ಎಚ್ಚರಿಸಿದರು.



