ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತ ದೇಶದ ಬೆನ್ನೆಲುಬು ಎಂದು ಹೇಳಿದರೆ ಸಾಲದು. ಯಾವುದೇ ಜಾತಿ, ಧರ್ಮಗಳ ಹಂಗಿಲ್ಲದೇ ಸಕಲ ಜೀವರಾಶಿಗಳಿಗೆ ಅನ್ನ ನೀಡುವ ಅನ್ನದಾತ/ಕೂಲಿಕಾರ ನೆಮ್ಮದಿಯಿಂದ ಬದುಕಲು ಆಳುವ ಸರ್ಕಾರಗಳು ಅವರ ಬೆನ್ನುಲುಬಾಗಿ ನಿಲ್ಲಬೇಕಿದೆ ಎಂದು ಶಿರಹಟ್ಟಿ/ಬಾಲೆಹೊಸೂರು ಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.
ಅವರು ಲಕ್ಷ್ಮೇಶ್ವರದಲ್ಲಿ ರೇಣುಕಾ ಟ್ರ್ಯಾಕ್ಟರ್ ವತಿಯಿಂದ ನಡೆದ ರೈತರ ಹಬ್ಬ ಮತ್ತು ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ಎನ್ನುವಂತೆ ಇಂದು ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಕೃಷಿಕರ ಅಗತ್ಯತೆ, ಪ್ರಾಮುಖ್ಯತೆ ಮಾತ್ರ ತಗ್ಗುವುದಿಲ್ಲ. ಅತಿವೃಷ್ಟಿ-ಅನಾವೃಷ್ಟಿ, ಹವಾಮಾನ ವೈಪರಿತ್ಯ, ಬೆಲೆ ಕುಸಿತ, ರೋಗಬಾಧೆ ಅನೇಕ ಸಮಸ್ಯೆಗಳ ನಡುವೆ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಕೃಷಿಯೂ ಒಂದು ವಿಜ್ಞಾನ, ಸಂಶೋಧನೆಯಾಗಿದ್ದು ಸರ್ಕಾರದ ಯೋಜನೆಗಳ ಸದ್ವಿನಿಯೋಗದೊಂದಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಬೆಳೆಯೊಂದಿಗೆ ಆರ್ಥಿಕ ಸ್ವಾವಲಂಬನೆ ಹೊಂದಬೇಕು. ಅದಕ್ಕಾಗಿ ರೈತರು ಕೃಷಿಯ ಜತೆಗೆ ಕೃಷಿಗೆ ಪೂರಕವಾದ ಹೈನುಗಾರಿಕೆ, ಸಾವಯುವ ಗೊಬ್ಬರ ತಯಾರಿಕೆ, ಕೋಳಿ, ಕುರಿ ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಮಾಡುವ ಮೂಲಕ ಸಮಗೃ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಸ್ವರಾಜ್ ಕಂಪನಿಯ ಸ್ಟೇಟ್ ಹೆಡ್ ರಿಷಿರಾಜ ಮತ್ತು ಸ್ವರಾಜ್ ಟ್ರ್ಯಾಕ್ಟರ್ಸ್ ಮಾಲೀಕರಾದ ವೈ.ಎನ್. ಪಲ್ಲೇದ ಮಾತನಾಡಿ, ಸ್ವರಾಜ್ ಟ್ರ್ಯಾಕ್ಟರ್ಸ್ ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನದೊಂದಿಗೆ ರೈತರು ಸೇರಿ ಇತರೇ ಎಲ್ಲ ಗ್ರಾಹಕರ ಅಚ್ಚುಮೆಚ್ಚಿನ ಟ್ರ್ಯಾಕ್ಟರ್ಸ್ ಆಗಿ ದೇಶದೆಲ್ಲೆಡೆ ಗ್ರಾಹಕರ ಮನಗೆದ್ದಿದೆ. ರೈತರು ತಮ್ಮ ಜಮೀನುಗಳಲ್ಲಿನ ಎಲ್ಲ ಬಗೆಯ ಮತ್ತು ಅತ್ಯಂತ ಕಠಿಣ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸುವ ಶಕ್ತಿಯುತ ಮತ್ತು ರೈತಸ್ನೇಹಿ ಟ್ರ್ಯಾಕ್ಟರ್ಸ್ ಸ್ವರಾಜ್ ಆಗಿದೆ. ಹೊಸ ತಂತ್ರಜ್ಞಾನ, ವಿಶ್ವಾಸಾರ್ಹತೆ ಮತ್ತು ಉತ್ತಮ ಸೇವೆಯಿಂದ ರೈತರ ಮನಗೆಲ್ಲುವ ಮೂಲಕ ಟ್ರ್ಯಾಕ್ಟರ್ಸ್ ಮಾರಾಟ ಸಂಖ್ಯೆ ಹೆಚ್ಚಿಸಲಾಗಿದೆ. ರೈತರ ಸಹಕಾರವೇ ಎಲ್ಲದಕ್ಕೂ ಮುಖ್ಯವಾಗಿದೆ ಎಂದರು.
ಶಾಸಕರಾದ ಎಂ.ಆರ್. ಪಾಟೀಲ, ಡಾ. ಚಂದ್ರು ಲಮಾಣಿ ಮಾತನಾಡಿದರು. ಈ ವೇಳೆ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಸಂಗಯ್ಯ ಪೂಜಾರ, ಚನ್ನಪ್ಪ ಜಗಲಿ, ಸುನೀಲ ಮಹಾಂತಶೆಟ್ಟರ, ಮಲ್ಲಿಕಾರ್ಜುನ ಬಾಳಿಕಾಯಿ, ಜೆ.ಸಿ. ಪಾಟೀಲ, ವಿರೂಪಾಕ್ಷ ಆದಿ, ಕಂಪನಿಯ ಅಧಿಕಾರಿಗಳಾದ ವಿಲಾಸ್ ಸಾಗರ, ಮುಖೇಶ ಬಲ್ಲೆ, ಮಂಜುನಾಥ ಪಾಟೀಲ, ಮಲ್ಲಿಕಾರ್ಜುನ ಬುರ್ಲಿ, ನೀಲಪ್ಪ ಬಿ, ಬಸವರಾಜ ಅರಳಿ, ಶಿವಯೋಗಿ ಹೊಸಕೇರಿ, ಮುಕ್ತುಮಸಾಬ, ಸಂಗಮೇಶ, ವಿರೂಪಾಕ್ಷಪ್ಪ, ಬಿ.ಎಂ. ನಾವಳ್ಳಿ, ಪ್ರಭುಗೌಡ ಸಂಕನಗೌಡ, ಸಿದ್ದಣ್ಣ ಹುಣಸಣ್ಣವರ, ಶಂಕ್ರಪ್ಪ ಆದಿ, ಬಿ.ಡಿ. ಪಲ್ಲೇದ ಸೇರಿ ರೇಣುಕಾ ಟ್ರ್ಯಾಕ್ಟರ್ಸ್ ಶೋರೋಮ್ನ ಸಿಬ್ಬಂದಿಗಳು ಇದ್ದರು.
ಈ ಸಂದರ್ಭದಲ್ಲಿ ವೈ.ಎಸ್. ಕ್ಯೂಬಿಹಾಳ, ಹುತ್ತನಗೌಡ ತೆಂಬದಮನಿ ಅವರನ್ನು ಸನ್ಮಾನಿಸಲಾಯಿತು. ಟ್ರ್ಯಾಕ್ಟರ್ಸ್ ಖರೀದಿಸಿ ಬಹುಮಾನ ಪಡೆದ ಇಬ್ಬರು ರೈತರಿಗೆ ಬೈಕ್ ಮತ್ತು 25ಕ್ಕೂ ಹೆಚ್ಚು ರೈತರು ಬಹುಮಾನಗಳನ್ನು ಪಡೆದರು. ಸ್ನೇಹಾ ಮಾಲಿಪಾಟೀಲ, ಎಸ್.ಎಫ್. ಆದಿ ನಿರೂಪಿಸಿದರು.
ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಸಂಕದಾಳದ ಶ್ರೀ ಹಾಲಶಿವಯೋಗಿಗಳು ಮಾತನಾಡಿ, ನಾಡಿನಲ್ಲಿ ಇನ್ನೂ ಧರ್ಮ, ನೀತಿ, ನ್ಯಾಯ, ಪರೋಪಕಾರದಂತಹ ಸದ್ಗುಣಗಳು ಉಳಿದಿರುವುದು ಕೃಷಿಕ ವರ್ಗದವರಲ್ಲಿ. ಪ್ರತಿಯೊಬ್ಬರೂ ತುತ್ತು ಅನ್ನ ತಿನ್ನುವ ಮೊದಲು ರೈತನನ್ನು ನೆನೆಯಬೇಕು. ಸರ್ಕಾರಗಳು ರೈತರಿಗೆ ಹೊಸ ತಂತ್ರಜ್ಞಾನ, ಯಂತ್ರೋಪಕರಣಗಳ ಸೌಲಭ್ಯ ಕಲ್ಪಿಸಬೇಕು ಎಂದರು.