ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರು ತಮ್ಮ ಹೊಲಕ್ಕೆ ಹೋಗುವ ರಸ್ತೆಗಳ ಸುಧಾರಣೆಗೆ ಹಲವಾರು ಬಾರಿ ಸರಕಾರದ ಬಳಿ ಗೋಗರೆಯುವುದು ಸಾಮಾನ್ಯ ಎನ್ನುವಂತಾಗಿದ್ದು, ಸರಕಾರ ರೈತರ ಮನವಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ರೈತರೇ `ನಮ್ಮ ಹೊಲ-ನಮ್ಮ ರಸ್ತೆ’ ದುರಸ್ತಿಗೆ ಮುಂದಾಗಿದ್ದಾರೆ.
ಪಟ್ಟಣದಿಂದ ಯತ್ನಳ್ಳಿ ಹೋಗುವ ದಾರಿ ಮಧ್ಯೆ ದನದಮನೆ ಅವರ ಜಮೀನಿನಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸಣ್ಣ ಬ್ರಿಡ್ಜ್ ತುಂಬಿ ಹರಿದ ನೀರಿನ ರಭಸಕ್ಕೆ ದಾರಿ ಕೊಚ್ಚಿಹೋಗಿ ಕೊರಕಲು ಬಿದ್ದಿದ್ದು, ರೈತರಿಗೆ ಅನಾನುಕೂಲವಾಗಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ, ಸಂಬಂಧಿಸಿದ ಇಲಾಖೆಗೆ ಮೌಖಿಕವಾಗಿ ರಸ್ತೆ ಸುಧಾರಣೆ ಮಾಡುವಂತೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಬೇಸತ್ತ ರೈತರು ಗುದ್ದಲಿ-ಸಲಕಿ ಹಿಡಿದು ರಸ್ತೆಗಿಳಿದು ಕಿತ್ತು ಹೋಗಿರುವ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಹಾದೇವಪ್ಪ ಕುಂದಗೋಳ, ದ್ಯಾಮಣ್ಣ ಕಮತದ, ದುಂಡೆಶ ಕೋಟಗಿ, ಅಕಂಡಯ್ಯ ಅಕಳಂಡಸ್ವಾಮಿಮಠ, ಸೋಮಣ್ಣ ಮಾಗಡಿ, ಸೋಮಣ್ಣ ಹಾದಿಮನಿ ಸೇರಿದಂತೆ ಅನೇಕ ರೈತರು ಇದ್ದರು.