ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕಲಾ ವಿಭಾಗದ ಅಂತಿಮ ವರ್ಷದ ಅರ್ಥಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಂದ ಬೀದಿಬದಿ ವ್ಯಾಪಾರಸ್ಥರ ಆರ್ಥಿಕ ಸ್ಥಿತಿಗತಿ ಕುರಿತು ಕ್ಷೇತ್ರಾಧ್ಯಯನ ಹಮ್ಮಿಕೊಳ್ಳಲಾಗಿತ್ತು.
ಈ ಕುರಿತು ಮಾಹಿತಿ ಸಂಗ್ರಹಿಸಲು ಗದುಗಿನ ಭೂಮರಡ್ಡಿ ವೃತ್ತದ ಹತ್ತಿರವಿರುವ ಬೀದಿಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ವಿವಿಧ ಹಳ್ಳಿಗಳ ಹಾಗೂ ಸ್ಥಳೀಯ ವಿವಿಧ ವ್ಯಾಪಾರಸ್ಥರಿಂದ ಇಂದಿನ ಅಧುನಿಕ ಯುಗದಲ್ಲಿ ಬೀದಿಬದಿ ವ್ಯಾಪಾದೊಂದಿಗಿನ ಆರ್ಥಿಕ ಬದುಕಿನ ಸಂಬಂಧಗಳ ಕುರಿತು ಮಾಹಿತಿ ಪಡೆದುಕೊಂಡರು.
ಪ್ರಶ್ನಾವಳಿಗಳ ಮೂಲಕ ವ್ಯಾಪಾರಸ್ಥರೊಂದಿಗೆ ಚರ್ಚೆ ಮಾಡುತ್ತಾ, ವ್ಯಾಪಾರದ ಗುಣಮಟ್ಟ, ಸರಕು, ಆದಾಯ, ಅವರ ಸಮಸ್ಯೆಗಳು ಹಾಗೂ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಈ ಕ್ಷೇತ್ರಾಧ್ಯಯನ ಕಾರ್ಯದಲ್ಲಿ ಪ್ರೊ. ವನಜಾಕ್ಷಿ ಸೂಡಿ ಹಾಗೂ ಪ್ರೊ. ಶ್ವೇತಾ ಸಿ ಭಾಗವಹಿಸಿದ್ದರು.