ವಿಜಯಸಾಕ್ಷಿ ಸುದ್ದಿ, ಮೈಸೂರು: ಕ್ರಿಯೇಟಿವ್ ಕಾನ್ಸೆಪ್ಟ್ ಸ್ ಬೆಂಗಳೂರು ಬ್ಯಾನರ್ ಅಡಿ ಮೈಸೂರಿನ ಅಗ್ರಹಾರದ ಶ್ರೀಕೃಷ್ಣ ದೇವಸ್ಥಾನದಲ್ಲಿ `ಶಿ ಈಸ್ ಮೈ ಲವ್’ ಚಲನಚಿತ್ರದ ಚಿತ್ರೀಕರಣ ಮುಹೂರ್ತ ನೆರವೇರಿತು.
ಅತಿಥಿಗಳಾಗಿ ಆಗಮಿಸಿದ್ದ ಶಾಸಕರಾದ ಟಿ.ಎಸ್. ವತ್ಸ ಅವರು ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ, ಚಿತ್ರೀಕರಣ ಯಶಸ್ವಿಯಾಗಿ ನಡೆದು ಉತ್ತಮ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು. ಚಲನಚಿತ್ರ ನಿರ್ಮಾಪಕ ಎಂ.ಡಿ. ಪಾರ್ಥಸಾರಥಿ, ನಿರ್ಮಾಪಕ-ನಿರ್ದೇಶಕ ಲೋಕೇಶ್ ವಿದ್ಯಾಧರ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಮಾತುಕತೆಗಳಿಲ್ಲದೇ ಆಂಗಿಕ ಸಂಜ್ಞೆಯ ಮೂಲಕವೇ ಸಾಗುವ ಮೂಕಿ ಚಿತ್ರ. ಈ ಚಿತ್ರದಲ್ಲಿ ನಾಯಕ ಕಿವುಡ ಹಾಗೂ ಮೂಗ. ಆತ ಒಂದು ಹುಡುಗಿಯನ್ನು ಪ್ರೀತಿಸುತ್ತಾನೆ. ಮಾತು ಬಾರದ ಹಾಗೂ ಕಿವಿ ಕೇಳದ ಹುಡುಗ ಹೇಗೆ ಪ್ರೀತಿ ಮಾಡ್ತಾನೆ, ಆ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾನೆ, ಕೊನೆಗೆ ಅವಳನ್ನು ಹೇಗೆ ಮದುವೆಯಾಗುತ್ತಾನೆ ಎನ್ನುವ ಕಥಾಹಂದರ ಚಿತ್ರದಲ್ಲಿದೆ. ಮೈಸೂರಿನ ಸುತ್ತ ಮುತ್ತ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ, ನಿರ್ಮಾಪಕರಾದ ಜನಾರ್ಧನ ರಾಜು ಹೇಳಿದರು.
ತಾರಾಗಣದಲ್ಲಿ ನವೀನ, ಅಶ್ರೀತಾ, ವಾಸ್ತವ, ಅನುರಾಧ, ಅಶೀನಾ, ರಾಜಕುಮಾರ್, ಮುತ್ತುರಾಜ್, ಮಮತಾ, ಲೋಕೇಶ್ ವಿದ್ಯಾಧರ, ಪ್ರದೀಪ, ತನ್ಯಾ, ವೆಂಕಟೇಶ, ಮನೀಷಾ, ಮಣಿಕಂಠ, ಕೆ. ಸಾಯಿ ಚೈತನ್ಯಕುಮಾರ್, ಕಿರಣ್ ಮೊದಲಾದವರಿದ್ದಾರೆ. ತಾಂತ್ರಿಕವರ್ಗದಲ್ಲಿ ಸಂಗೀತ ಸಂದೀಪ, ಪ್ರಸಾಧನ ಗೋಪಿ, ವಸ್ತ್ರಾಲಂಕಾರ ರಾಮ್ಬಾಬು, ಕಲಾನಿರ್ದೇಶನ ಸಾಯಿ ಕಲ್ಯಾಣಕುಮಾರ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಸಹನಿರ್ದೇಶನ ಪ್ರಶಾಂತ ರಾಯ್, ಪ್ರೊಡಕ್ಷನ್ ಮ್ಯಾನೇಜರ್ ಯುವರಾಜ ಇದ್ದು, ಜನಾರ್ಧನ ರಾಜು ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನದ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ.