ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಈ ಸಮಾಜಕ್ಕೆ ಹಿರಿಯರ ಕೊಡುಗೆ ಅಪಾರವಿದೆ. ನಿವೃತ್ತರಿಂದ ಸಮಾಜಕ್ಕೆ ಇನ್ನೂ ದೊಡ್ಡ ಕೊಡುಗೆ ಬರಬೇಕಿದೆ. ಈ ದಿಶೆಯಲ್ಲಿ ಈಗಾಗಲೇ ನಿವೃತ್ತರಾಗಿರುವವರು, ಹಿರಿಯ ನಾಗರಿಕರು ಯೋಚಿಸಬೇಕಿದೆ ಎಂದು ಶಿಕ್ಷಣ ತಜ್ಞ ಮಹೇಶ ಮಾಶಾಳ ಹೇಳಿದರು.
ಇಲ್ಲಿನ ಶ್ರೀ ಅನ್ನದಾನೇಶ್ವರ ಸಭಾಂಗಣದಲ್ಲಿ ಅಕ್ಷರ ಭಾರತ ಪ್ರತಿಷ್ಠಾನ ಗದಗ ಹಾಗೂ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಸಹಯೋಗದಲ್ಲಿ ನಡೆದಿರುವ ಶೈಕ್ಷಣಿಕ ಪುನಃಶ್ಚೇತನ ಕಾರ್ಯಕ್ರಮದ 2ನೇ ದಿನದ `ಭವಿಷ್ಯದ ಶಿಕ್ಷಕ ಗೋಷ್ಠಿ’ಯಲ್ಲಿ ಅವರು ಮಾತನಾಡಿದರು.
ಬಹಳಷ್ಟು ಜನ ಸೇವೆಗೆ ಸೇರಿದ ಕೆಲವೇ ವರ್ಷಗಳಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿ ವೃತ್ತಿಯಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ನಿಮ್ಮ ವೃತ್ತಿ ಜೀವನದ ಅವಧಿ ಇರುವವರೆಗೂ ಪ್ರಾಮಾಣಿಕತೆಯಿಂದ ನಿಮ್ಮ ಸೇವೆಯನ್ನು ಸಲ್ಲಿಸಿ. ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ಬರೆಯಿರಿ ಎಂದು ಹೇಳಿದರು.
ಈಗಾಗಲೇ ಶಿಕ್ಷಕ ವೃತ್ತಿಯಿಂದ ನಿವೃತ್ತರಾದವರೂ ಸಹ ಇಂದಿನ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಮಕ್ಕಳಿಗೂ ಮಾರ್ಗದರ್ಶನ ಮಾಡಿ ದೇಶದ ಭವಿಷ್ಯಕ್ಕೆ ಕಾರಣರಾಗಬೇಕು. ಉದಾಸೀನ ಮನೋಭಾವನೆಯನ್ನು ನಿವೃತ್ತರು ಎಂದಿಗೂ ಪ್ರದರ್ಶಿಸಬಾರದು ಎಂದು ಕಿವಿಮಾತು ಹೇಳಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾಶಾಳ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಕಾಲೇಜು ಆಡಳಿತ ಮಂಡಳಿ ಚೇರಮನ್ ಬಸವರಾಜ ವೀರಾಪೂರ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಪಿಯು ಪ್ರಾಚಾರ್ಯ ವೈ.ಸಿ. ಪಾಟೀಲ, ಪ್ರಾಚಾರ್ಯೆ ಅನಸೂಯಾ ಪಾಟೀಲ ಮುಂತಾದವರಿದ್ದರು.