HomeGadag Newsಬರದ ನಡುವೆಯೂ ಗಣೇಶ ಹಬ್ಬದ ಖರೀದಿ ಭರಾಟೆ

ಬರದ ನಡುವೆಯೂ ಗಣೇಶ ಹಬ್ಬದ ಖರೀದಿ ಭರಾಟೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬರಗಾಲದ ಸಂಕಷ್ಟದಿಂದ ರೈತರ ಬದುಕು ಕಮರುತ್ತಿದ್ದರೂ ಗಣೇಶ ಹಬ್ಬದ ಸಂಭ್ರಮಕ್ಕೆ ಮಾತ್ರ ಬರದ ಛಾಯೆ ತಟ್ಟಿಲ್ಲ. ವಿಘ್ನವಿನಾಶಕನ ಸ್ವಾಗತಕ್ಕೆ ಸಜ್ಜಾದ ಜನತೆ ಹಬ್ಬದ ಮುನ್ನಾದಿನವಾದ ಭಾನುವಾರ ಪಟ್ಟಣದ ಮಾರುಕಟ್ಟೆಗೆ ಮುಗಿಬಿದ್ದು ಗಣೇಶ ಮೂರ್ತಿ, ಹೂವು-ಹಣ್ಣು, ತಳಿರು-ತೋರಣ, ದಿನಸಿ ಹಾಗೂ ಅಲಂಕಾರಿಕ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಹೊರತಾಲೂಕುಗಳಿಂದಲೂ ಜನರು ಆಗಮಿಸಿದ್ದರಿಂದ ಮಾರುಕಟ್ಟೆ ಜನಜಂಗುಳಿಯಿಂದ ಕಿಕ್ಕಿರಿದು, ವ್ಯಾಪಾರ-ವಹಿವಾಟು ಗರಿಗೆದರಿತ್ತು.

ಸೋಮವಾರ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದಲ್ಲಿ ಖರೀದಿ ಭರಾಟೆ ಜೋರಾಗಿತ್ತು. ವಿವಿಧೆಡೆ ಮನೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದವು. ಯುವಕರು ತಂಡಗಳನ್ನು ರಚಿಸಿಕೊಂಡು ವಿಶೇಷ ಪೂಜೆ, ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದ್ದಾರೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೂ ಬೇಡಿಕೆ ಕಂಡುಬಂದಿತು.

ಬೆಲೆ ಏರಿಕೆಯ ನಡುವೆಯೂ ಖರೀದಿ ಜೋರು

ಬರಗಾಲದಿಂದ ಮುಂಗಾರು ಬೆಳೆಗಳು ಕೈಕೊಟ್ಟಿರುವುದು ರೈತರ ಆರ್ಥಿಕ ಸ್ಥಿತಿಗೆ ಹೊಡೆತ ನೀಡಿದೆ. ಬೆಳೆಗಾಗಿ ಮಾಡಿದ ಖರ್ಚು ಮರಳದೆ ಸಂಕಷ್ಟದಲ್ಲಿದ್ದರೂ ಹಬ್ಬದ ಸಂಪ್ರದಾಯವನ್ನು ಕೈಬಿಡಲು ಜನರು ಸಿದ್ಧರಿಲ್ಲ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಗತ್ಯ ವಸ್ತುಗಳನ್ನು ಖರೀದಿಸಿ ಗಣೇಶ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಹೂವು, ಬಾಳೆ, ಕಬ್ಬು, ವೀಳ್ಯದೆಲೆ, ದಿನಸಿ ಹಾಗೂ ಅಲಂಕಾರಿಕ ವಸ್ತುಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಡಜನ್ ಬಾಳೆಹಣ್ಣು, ಸೇಬು, ಕಿತ್ತಳೆ, ಚಿಕ್ಕೂ ಹಾಗೂ ಮೋಸಂಬಿ ಒಳಗೊಂಡ ಐದು ಬಗೆಯ ಹಣ್ಣುಗಳ ಸೆಟ್‌ಗೆ ₹೧೫೦ರಿಂದ ₹೨೦೦ರವರೆಗೆ ದರವಿತ್ತು.

 ಮಾರುಕಟ್ಟೆಯಲ್ಲಿ ಜನಸಂದಣಿ; ಸಂಚಾರ ಅಸ್ತವ್ಯಸ್ತ

ತಾಲೂಕಿನ ವಿವಿಧ ಗ್ರಾಮಗಳಷ್ಟೇ ಅಲ್ಲದೆ ನೆರೆಯ ಕುಂದಗೋಳ, ಶಿರಹಟ್ಟಿ, ಶಿಗ್ಗಾಂವ ಹಾಗೂ ಸವಣೂರು ತಾಲೂಕುಗಳಿಂದಲೂ ಜನರು ವ್ಯಾಪಾರಕ್ಕಾಗಿ ಆಗಮಿಸಿದ್ದರಿಂದ ಪ್ರಮುಖ ಮಾರುಕಟ್ಟೆ ಪ್ರದೇಶ ಜನಸಂದಣಿಯಿಂದ ತುಂಬಿತ್ತು. ವಾಹನ ಸಂಚಾರ ಹೆಚ್ಚಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗಿದ್ದು, ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸಪಟ್ಟರು. ಬಸ್ ನಿಲ್ದಾಣದಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.

ಹಬ್ಬದ ದಿನ ಮತ್ತಷ್ಟು ಜನದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಪುರಸಭೆ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಪಟ್ಟಣದ ಸೊಪ್ಪಿನಕೇರಿ ಓಣಿಯ ಗಣೇಶ ಮೂರ್ತಿಯನ್ನು ಶನಿವಾರವೇ ಅದ್ದೂರಿ ಮೆರವಣಿಗೆ ಹಾಗೂ ದೀಪಾಲಂಕಾರದೊಂದಿಗೆ ಬರಮಾಡಿಕೊಳ್ಳಲಾಯಿತು. ಹಬ್ಬದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಪಟ್ಟಣದಲ್ಲಿ ಅಪಾರ ಸಂಖ್ಯೆಯ ಪೊಲೀಸರು ಬೀಡುಬಿಟ್ಟಿದ್ದಾರೆ.

ಬರದ ಸಂಕಷ್ಟದ ನಡುವೆಯೂ ವಿಘ್ನವಿನಾಶಕನ ಕೃಪೆಯಿಂದ ಉತ್ತಮ ಮಳೆ ಸುರಿದು ರೈತರ ಬದುಕು ಹಸನಾಗಲಿ, ಸಂಕಷ್ಟಗಳು ದೂರವಾಗಲಿ ಎಂಬ ಆಶಯದೊಂದಿಗೆ ತಾಲೂಕಿನ ಜನತೆ ಗಣೇಶನ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img