ಬೆಂಗಳೂರು:- ಸಂಕ್ರಾಂತಿಯಂದು ಪ್ರತಿವರ್ಷ ಗವಿಗಂಗಾಧರನ ಸನ್ನಿಧಿಯಲ್ಲಿ ನಡೆಯುತ್ತಿದ್ದ ವಿಸ್ಮಯಯನ್ನು ಈ ಭಾರೀ ಕಾಣದೇ ಭಕ್ತರು ಗಾಬರಿ ಆಗಿದ್ದಾರೆ. ಹೌದು, ಬಸವನಗುಡಿಯಲ್ಲಿರುವ ಗವಿಗಂಗಧಾರೇಶ್ವರ ದೇವಾಲಯದಲ್ಲಿ ಈ ಬಾರಿ ಸೂರ್ಯ ರಶ್ಮಿ ಗವಿಗಂಗಾಧರನ ಸ್ಪರ್ಶಿಸಿಲ್ಲ ಎನ್ನಲಾಗಿದ್ದು, ಇದು ಬಹುದೊಡ್ಡ ಗಂಡಾಂತರದ ಮುನ್ಸೂಚನೆ ಎಂದು ಭಕ್ತರು ಆತಂಕ ಹೊರ ಹಾಕಿದ್ದಾರೆ.
ದಕ್ಷಿಣ ಕಾಶಿ ಅಂತಾನೇ ಕರೆಯಲ್ಪಡೋ ಬೆಂಗಳೂರಿನ ಗವಿಗಂಗಾಧರನ ಸನ್ನಿಧಿಯಲ್ಲಿ ಸೂರ್ಯ ಕಿರಣ ಸ್ಪರ್ಶಿಸಲೇ ಇಲ್ಲ. ಇದು ಬಹುದೊಡ್ಡ ಗಂಡಾಂತರಕ್ಕೆ ಮುನ್ಸೂಚನೆ ಎಂದು ಖುದ್ದು ದೇಗುಲದ ಪ್ರಧಾನ ಅರ್ಚಕ ಡಾ.ಸೋಮಸುಂದರ ದೀಕ್ಷಿತರು ಹೇಳಿದ್ದಾರೆ.
ಪ್ರತೀ ವರ್ಷ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಾವಣೆ ಸಂದರ್ಭದಲ್ಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗ್ತಿತ್ತು. ಸಾಕ್ಷಾತ್ ಸೂರ್ಯದೇವ ಶಿವನ ಪಾದಕ್ಕೆರಗಿ ಆಶೀರ್ವಾದ ಹಾಗೂ ಅನುಮತಿ ಕೋರಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಾಗುತ್ತಾನೆ. ಅದಕ್ಕಾಗಿಯೇ ಈ ವರ್ಷ ಶುಭ ಮುಹೂರ್ತವೂ ಇತ್ತು.
ಸಂಜೆ 5 ಗಂಟೆ 14 ನಿಮಿಷದಿಂದ 5 ಗಂಟೆ 19 ನಿಮಿಷದ ಮಧ್ಯೆ ಸೂರ್ಯ ದೇವ ಕಾಣಿಸಿಕೊಳ್ಳುತ್ತಾನೆ. ಗವಿ ಗಂಗಾಧರೇಶ್ವರನಿಗೆ ಕಿರಣ ಕುಸುಮಾಂಜಲಿ ಸಮರ್ಪಿಸುತ್ತಾನೆ. ಆ ದೈವಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು ಅಂತಲೇ ಭಕ್ತರ ದಂಡು ಸೇರಿತ್ತು. ಆದರೇ ಈ ವರ್ಷ ಭಕ್ತರ ನಿರೀಕ್ಷೆಯೇ ಸುಳ್ಳಾಯ್ತು. ಆ ದಿನಕರ ಚಂದ್ರಶೇಖರನನ್ನು ಸ್ಪರ್ಶಿಸೋದಕ್ಕೆ ಬರಲೇ ಇಲ್ಲ.
ಮಕರ ಸಂಕ್ರಮಣದಂದು ಸೂರ್ಯ ರಶ್ಮಿ ಲಿಂಗವನ್ನು ಸ್ಪರ್ಶಿಸೋ ದೈವಿಕ ಕ್ಷಣ ಮಿಸ್ ಆಗಿದ್ದು ಭಕ್ತರಲ್ಲಿ ಬಹುದೊಡ್ಡ ಭಯವನ್ನೇ ಸೃಷ್ಟಿಸಿದೆ. ಪ್ರತೀ ವರ್ಷವೂ ಸಂಕ್ರಮಣ ಸಂದರ್ಭ ಸೂರ್ಯ ರಶ್ಮಿ ಶಿವಲಿಂಗವನ್ನು ಕೆಲ ನಿಮಿಷಗಳ ಕಾಲ ತಾಕುತ್ತಿದ್ದ. ಆ ಪುಣ್ಯ ಕ್ಷಣಗಳನ್ನ ಕಣ್ತುಂಬಿಕೊಂಡರೇ ಶುಭವಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೇ, ಈ ವರ್ಷ ಸಂಕ್ರಮಣದ ಶುಭ ಮುಹೂರ್ತವಿದ್ದ ಆ ಕೆಲವು ನಿಮಿಷಗಳಲ್ಲೂ ಸಹ ಸೂರ್ಯ ಬಾರಲೇ ಇಲ್ಲ. ಹಾಗಾಗಿಯೇ ಭಕ್ತರು ಬಹುದೊಡ್ಡ ಆತಂಕವನ್ನು ಹೊರ ಹಾಕುತ್ತಿದ್ದಾರೆ.