ವಿಜಯಸಾಕ್ಷಿ ಸುದ್ದಿ, ಗದಗ: ಈ ಸಾರಿ ಗದಗ ಜಿಲ್ಲಾ ವಕ್ಫ್ ಅಧ್ಯಕ್ಷ ಸ್ಥಾನವನ್ನು ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರಿಗೆ ನೀಡಿ ಎಂದು ಕಾಂಗ್ರೆಸ್ ಮುಖಂಡ ಎಂ.ಡಿ. ಜಾಫರ್ ಡಾಲಾಯತ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರ ಸಂಖ್ಯೆ ಕಡಿಮೆ ಇಲ್ಲ. ಯಾವುದೇ ಆಸೆ-ಆಕಾಂಕ್ಷೆ ಇಲ್ಲದೆ ಕೇವಲ ಪಕ್ಷ ನಿಷ್ಠೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದವರಿದ್ದಾರೆ. ವರಿಷ್ಠರ ಆಜ್ಞೆಗಳನ್ನು ಪಾಲಿಸುವರೇ ಸಾಮಾನ್ಯ ಕಾರ್ಯಕರ್ತರು. ಅವರನ್ನು ಗುರುತಿಸಿ ಅವರಿಗೂ ಸ್ಥಾನವನ್ನು ನೀಡಿ ಹೆಚ್ಚಿನ ಸೇವೆ ಮಾಡಲು ಜಿಲ್ಲೆಯ ನಾಯಕರು ಅನುಕೂಲ ಮಾಡಿಕೊಡುಬೇಕು.
ಸಾಮಾನ್ಯ ಕಾರ್ಯಕರ್ತರು ಸಾಮಾನ್ಯ ಕಾರ್ಯಕರ್ತರಾಗಿಯೇ ಉಳಿದಿದ್ದಾರೆ. ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇಲ್ಲದೆ ಕೇವಲ ಜೀತದ ಆಳುಗಳಂತೆ ಇವರನ್ನು ಇಡಲಾಗಿದೆ. ಚುನಾವಣೆ ಸಂದರ್ಭಗಳಲ್ಲಿ, ಬೀದಿಗಳಲ್ಲಿ ಹೋರಾಟ ಮಾಡುವ ಸಂದರ್ಭಗಳಲ್ಲಿ ಇವರನ್ನು ಉಪಯೋಗಿಸಿಕೊಳ್ಳಲಾಗುತ್ತದೆಯೇ ಹೊರತು ಯಾವುದೇ ಸ್ಥಾನಮಾನ ನೀಡಿಲ್ಲ. ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿದೆ. ಅದನ್ನು ಕಾಪಾಡುವುದು ವರಿಷ್ಠರ ಮಹತ್ತರ ಜವಾಬ್ದಾರಿಯಾಗುತ್ತದೆ ಎಂದು ಅವರು ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ.