ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಗದಗ ಜಿಲ್ಲಾಡಳಿತ ಭವನದಲ್ಲಿ ಸದ್ಭಾವನಾ ದಿನ ಆಚರಿಸಲಾಯಿತು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ಹಾಗೂ ನೆರೆದ ಸಾರ್ವಜನಿಕರಿಗೆ ಸದ್ಭಾವನಾ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ನಾನು ಭಾರತ ದೇಶದ ಜನರ ನಡುವೆ ಧರ್ಮ, ಭಾಷೆ, ಪ್ರದೇಶ ಅಥವಾ ಜಾತಿ ಭೇದವಿಲ್ಲದೆ ಭ್ರಾತೃತ್ವ, ಏಕತೆ ಮತ್ತು ಶಾಂತಿಯನ್ನು ಕಾಪಾಡುವಲ್ಲಿ ನನ್ನ ಪಾತ್ರವನ್ನು ನಿರ್ವಹಿಸುತ್ತೇನೆ. ಹಿಂಸೆ, ಅಸಹಿಷ್ಣುತೆ ಮತ್ತು ಅಸಮಾನತೆ ವಿರುದ್ಧ ನಿಲ್ಲುತ್ತೇನೆ ಎಂದು ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು.
ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ರಾಷ್ಟ್ರೀಯ ಏಕತೆ ಬೆಳೆಸುವುದು, ಧರ್ಮ, ಜಾತಿ, ಭಾಷೆ, ಪ್ರದೇಶಗಳ ಭೇದವಿಲ್ಲದೆ ಮಾನವೀಯತೆ, ಸಹಿಷ್ಣುತೆ ಮತ್ತು ಶಾಂತಿ ಕಾಪಾಡುವುದು, ದೇಶದ ಯುವಪೀಳಿಗೆಗೆ ಏಕತೆಯ ಸಂದೇಶ ನೀಡುವುದು ಈ ಸದ್ಭಾವನಾ ದಿನಾಚರಣೆಯ ಉದ್ದೇಶವಾಗಿದೆ.
ಈ ವೇಳೆ ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್, ಎಸಿ ಗಂಗಪ್ಪ ಎಂ, ಜಿಲ್ಲಾದಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ, ಬಿಸಿಎಂ ಜಿಲ್ಲಾ ಅಧಿಕಾರಿ ಎಂ.ಎಂ. ತುಂಬರಮಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.