ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಂದಿನ ಆಧುನಿಕ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಹೊಸ ಅನ್ವೇಷಣೆ- ಸಂಶೋಧನೆಗಳಿಂದ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ದೇಶದ ಅಭಿವೃದ್ಧಿಗೆ ಪೂರಕ ಕಾರ್ಯ ಮಾಡುವ ಗುರಿಯನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದಾಗಬೇಕು ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಆನಂದ ದೇಶಪಾಂಡೆ ಅಭಿಪ್ರಾಯಪಟ್ಟರು.
ಅವರು ಶನಿವಾರ ಇಲ್ಲಿನ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 2024ರಲ್ಲಿ ತಾಂತ್ರಿಕ ಶಿಕ್ಷಣದ ವಿವಿಧ ವಿಭಾಗಗಳಲ್ಲಿ ಪದವಿ ಪೂರೈಸಿದ ಸುಮಾರು 226 ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಾಧಿಸುವ ಇಚ್ಛೆಯಿದ್ದರೆ ಏನೆಲ್ಲ ಸಾಧನೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವ ಇಂಜಿನಿಯರುಗಳು ದೇಶದ ವಿವಿಧ ಕ್ಷೇತ್ರಗಳ ಮತ್ತಷ್ಟು ಪ್ರಗತಿಗಾಗಿ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದು ತಮ್ಮದೇ ಆದ ಶ್ರೇಷ್ಠ ಕೊಡುಗೆ ಸಲ್ಲಿಸಬೇಕು. ಮೊಬೈಲ್, ಕಂಪ್ಯೂಟರ್ ಬಳಕೆ ಅತಿಯಾಗುತ್ತಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದರ ಸದ್ವಿನಿಯೋಗ ಮಾಡಿಕೊಳ್ಳಬೇಕು. ಯುವಕರು ದೇಶದ ಶಕ್ತಿಯಾಗಿದ್ದು, ನಮಗೆ ಭಾಷೆ, ನಡುವಳಿಕೆ, ಸಂಸ್ಕೃತಿ, ಸದಾಚಾರ, ಬದುಕಿಗೆ ಆಸರೆ ಕಲ್ಪಿಸಿದ ಸಮಾಜ ಮತ್ತು ರಾಷ್ಟç ನಿರ್ಮಾಣಕ್ಕೆ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಸಮರ್ಪಣಾ ಮನೋಭಾವ ಹೊಂದಬೇಕು ಎಂದರು.
ಮಕ್ಕಳ ಭವಿಷ್ಯದ ಬಗ್ಗೆ ಹತ್ತಾರು ಕನಸುಗಳನ್ನು ಕಂಡ ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ, ಋಣಾತ್ಮಕ ಚಿಂತನೆಯನ್ನು ಬದಿಗೊತ್ತಿ ಇದು ನನ್ನಿಂದ ಸಾಧ್ಯ ಎಂಬ ಧನಾತ್ಮಕ ಮನೋಭಾವ, ಆತ್ಮಸ್ಥೈರ್ಯದಿಂದ ಮುನ್ನಡೆದರೆ ಯಶಸ್ಸು ಸಾಧ್ಯ. ಇಂದಿನ ತಾಂತ್ರಿಕ ಮತ್ತು ಔದ್ಯೋಗಿಕ ಯುಗದಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಅದರ ಜೊತೆ ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನು ಮಾಡುವಂತಹ ಶ್ರೇಷ್ಠ ನಾಗರಿಕರು ನೀವಾಗಬೇಕು. ಮಕ್ಕಳಿಗಾಗಿ ಕಷ್ಟಪಟ್ಟ ತಂದೆ-ತಾಯಂದಿರು, ವಿದ್ಯೆ ನೀಡಿದ ಗುರುಗಳನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಡಾ. ಸುಭಾಸ ಮೇಟಿ, ಡಾ. ಗಿರೀಶ ಯತ್ತಿನಹಳ್ಳಿ, ಡಾ. ಆರ್.ಎಂ. ಪಾಟೀಲ, ಡಾ. ಎನ್. ಹಯವದನ, ಡಾ. ಎಸ್.ವಿ. ಮಹಾಪುರುಷ, ಡಾ. ವಿಕ್ರಮ ಶಿರೋಳ, ಡಾ. ದೇವೆಂದ್ರಪ್ಪ ಕೆ., ಡಾ. ಸಂತೋಷ ಬುಜರಿ, ಪ್ರೊ. ರಾಜೇಂದ್ರಕುಮಾರ ಶೆಟ್ಟರ, ಪ್ರೊ. ಶಂಭುಲಿಂಗಪ್ಪ ಎಚ್.ಎಸ್, ಡಾ. ಅರುಣ ಕುಂಬಿ, ಪ್ರೊ. ರಾಜೇಶ್ವರಿ ಗಾಮನಗಟ್ಟಿ, ಪ್ರೊ. ಪ್ರತಿಮಾ ತಾಳಿಕೋಟಿ, ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ಎಸ್.ಎಫ್. ಕೊಡ್ಲಿ, ಮುಂತಾದವರು ಉಪಸ್ಥಿತರಿದ್ದರು. ಪ್ರೊ. ಪ್ರತಿಮಾ ಮಹಾಪುರುಷ ಸ್ವಾಗತಿಸಿದರು, ವೈಭವಿ ಪ್ರಾರ್ಥಿಸಿದರು, ಮೇಘಾ, ಶ್ರದ್ಧಾ ನಿರೂಪಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಪರಶುರಾಮ ಬಾರಕಿ ಮಾತನಾಡಿ, ದಿ.ವೆಂಕಪ್ಪ ಅಗಡಿಯವರು ತಮ್ಮ ಹುಟ್ಟೂರಿನಲ್ಲಿ ತಾಂತ್ರಿಕ ಕಾಲೇಜು ಸ್ಥಾಪಿಸುವ ಮೂಲಕ ಅವರ ಊರಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಉನ್ನತ ದರ್ಜೆಯ ಶಿಕ್ಷಣ ನೀಡುತ್ತಿರುವ ಅಗಡಿ ಸಂಸ್ಥೆಯು 21 ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಸೇವೆ ನೀಡುತ್ತಿದ್ದು, ಎಲ್ಲರ ಸಹಕಾರದಿಂದ ಉತ್ತಮ ಸಾಧನೆ ಮಾಡುತ್ತಿರುವದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ ಎಂದರು.