ವಿಜಯಸಾಕ್ಷಿ ಸುದ್ದಿ, ರೋಣ : ಮತಕ್ಷೇತ್ರದಲ್ಲಿನ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ ಈಗಾಗಲೇ 5 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇಟಗಿ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ 90 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಹಾಗೂ ರಾಜ್ಯ ಖನಿಜ ನಿಮಗದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಅವರು ಇಟಗಿ ಗ್ರಾಮದಲ್ಲಿ ಸ್ಥಗಿತಗೊಂಡಿದ್ದ ಶಾದಿ ಮಹಲ್ ನಿರ್ಮಾಣಕ್ಕೆ 90 ಲಕ್ಷ ರೂಗಳ ಅನುದಾನವನ್ನು ಒದಗಿಸುವ ಮೂಲಕ ಕಾಮಗಾರಿಗೆ ಮರು ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದ ಸಂದರ್ಭದಲ್ಲಿ ರೋಣ, ಗಜೇಂದ್ರಗಡ, ನರೆಗಲ್ಲ, ಮಾರನಬಸರಿ, ಕೊಟುಮಚಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
ವಿಪರ್ಯಾಸವೆಂದರೆ, ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಶಾದಿ ಮಹಲ್ಗಳಿಗೆ ಅನುದಾನ ಒದಗಿಸಲಿಲ್ಲವಾದ್ದರಿಂದ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದು, ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಅನುದಾನ ನೀಡಿ ಮರು ಚಾಲನೆ ನೀಡಲಾಗಿದೆ ಎಂದರು.
ಧರ್ಮರ ಮಠದ ಷಣ್ಮುಕಪ್ಪಜ್ಜನವರು ಸಾನಿಧ್ಯ ವಹಿಸಿದ್ದರು. ಸಂಗನಗೌಡ ಪಾಟೀಲ, ಬಿ.ಎಂ. ದಂಡಿನ, ಯೂಸುಪ್ ಇಟಗಿ, ಪ್ರಭು ಮೇಟಿ, ಸುಭಾನ ಅರಗಿದ್ದಿ, ಉಮರಪಾರೂಖ ಹುಬ್ಬಳ್ಳಿ, ಇಸ್ಮಾಯಿಲ್ ಹೊರಪೇಟಿ, ಕಾಶೀಮಸಾಬ ದೋಟಿಹಾಳ ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಇಟಗಿ ಗ್ರಾಮಕ್ಕೆ 90 ಲಕ್ಷ, ನರೆಗಲ್ಲ 25 ಲಕ್ಷ, ಮಾರನಬಸರಿ 10 ಲಕ್ಷ, ಬಾಗವಾನ್ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ, ಹರ್ಲಾಪೂರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ ಸೇರಿದಂತೆ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಹೆಚ್ಚಿನ ನೆರವನ್ನು ಒದಗಿಸಲಾಗಿದ್ದು, ಇನ್ನೂ ಹೆಚ್ಚಿನ ನೆರವು ನೀಡಲಾಗುವುದು. ಜೊತೆಗೆ ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕೂ ಸಹ ಸರಕಾರ ಚಾಲನೆ ನೀಡಿದೆ ಎಂದ ಶಾಸಕ ಜಿ.ಎಸ್. ಪಾಟೀಲ, ಬರಿಯ ಅಲ್ಪಸಂಖ್ಯಾತ ಸಮುದಾಯವಲ್ಲದೆ ಗಾಣಿಗ, ಪಂಚಮಸಾಲಿ, ಹಾಲುಮತ, ಸವಿತಾ ಸಮಾಜ ಸೇರಿ ಎಲ್ಲ ಸಮುದಾಯಗಳಿಗೆ ಅನುದಾನವನ್ನು ಕಲ್ಪಿಸಲಾಗಿದೆ ಎಂದರು.