ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಪಂಚಮಸಾಲಿ ಸಮಾಜದ ಸಂಘಟನೆಯ ಉದ್ದೇಶದಿಂದ ಹರಿಹರದಲ್ಲಿ ಪಂಚಮಸಾಲಿ ಪೀಠವನ್ನು ಪ್ರಾರಂಭಿಸಿ ತನ್ಮೂಲಕ ಇಂದು ಎಲ್ಲರ ಗಮನ ಸೆಳೆಯುವ ಸಂಘಟನೆಯಾಗಿ ಬೆಳೆದು ನಿಂತಿದೆ. 1994ರಲ್ಲಿ ಸಂಘಟನೆ ಪ್ರಾರಂಭವಾಗಿದ್ದು, 2009ರಲ್ಲಿ ಪಂಚಮಸಾಲಿಗಳ ಸಂಘಟನೆ ವಿಷಯವಾಗಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜ.ಶ್ರೀ ವಚನಾನಂದ ಶ್ರೀಗಳು ನುಡಿದರು.
ಅವರು ಪಟ್ಟಣದ ವರ್ತಕರ ಭವನದಲ್ಲಿ ಲಕ್ಷ್ಮೇಶ್ವರ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣದ 6ನೇ ವರ್ಷದ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಪಂಚಮಸಾಲಿಗಳು ಕೃಷಿಯನ್ನು ಅವಲಂಬಿಸಿ ಬದುಕು ಸಾಗಿಸುತ್ತಾ, ಎಲ್ಲ ಸಮಾಜಗಳೊಂದಿಗೆ ಹೊಂದಿಕೊಂಡು ಬದುಕುತ್ತಾರೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೂ ಸಹ ರಾಜಕೀಯವಾಗಿ, ಔದ್ಯೋಗಿಕವಾಗಿ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಂಚಮಸಾಲಿ ಪೀಠ ಸಮಾಜ ಸಂಘಟನೆಯನ್ನು ಮಾಡುತ್ತಿದ್ದು, ಇಂದು ಹರಿಹರ ಪೀಠ ಬಲಾಢ್ಯವಾಗಿ ಬೆಳೆದು ನಿಂತಿದೆ. ಶ್ರೀಮಠದಲ್ಲಿ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಹಾಗೂ ಆಧ್ಯಾತ್ಮ ಈ ಪಂಚದಾಸೋಹ ಸೇವೆಗಳನ್ನು ನಡೆಸುವ ಸಂಕಲ್ಪವನ್ನು ಇಟ್ಟುಕೊಂಡು ಬೆಳೆದು ನಿಂತಿದ್ದು ಅದಕ್ಕೆ ಭಕ್ತರ ಸಹಾಯ ಸಹಕಾರ ದೊರೆಯುತ್ತಿದೆ. ಸಮುದಾಯದ ಯಾವುದೇ ಮಗು ವಿದ್ಯೆಯಿಂದ ವಂಚಿತವಾಗಬಾರದು ಎನ್ನುವದು ಶ್ರೀಮಠದ ಉದ್ದೇಶವಾಗಿದೆ.
ಎಪ್ರಿಲ್ 20ರಂದು ತಾವು ಹರಿಹರ ಪೀಠದ ಪೀಠಾರೋಹಣ ಮಾಡಿ 6 ವರ್ಷಗಳಾಗುತ್ತಿದ್ದು, ಇದರ ನಿಮಿತ್ತ ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಭಕ್ತರು ಸಹಕಾರ ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಪಂಚಮಸಾಲಿ ಪೀಠದ ಶ್ರೀ ವಚನಾನಂದ ಜಗದ್ಗುರುಗಳ ಸತ್ಯಸಂಕಲ್ಪ ಮತ್ತು ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಪೀಠವನ್ನು ಶ್ರೀಗಳು ಅಲಂಕರಿಸಿದ ಮೇಲೆ ಎಲ್ಲರೂ ಸಮಾಜದೆಡೆಗೆ ನೋಡುವಂತಾಗಿದೆ. ಶ್ರೀಗಳು 6 ವರ್ಷಗಳಿಂದ ಅನೇಕ ಸಮಾಜೋಪಯೋಗಿ ಕಾರ್ಯಗಳನ್ನು ಮಾಡಿದ್ದು ಅವರ ಪೀಠಾರೋಹಣದ ಕಾರ್ಯಕ್ರಮವನ್ನು ಭಕ್ತಾಧಿಗಳು ಸೇರಿ ಅದ್ದೂರಿಯಿಂದ ಆಚರಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಇದಕ್ಕಾಗಿ ಗದಗ ಜಿಲ್ಲೆಯ ಎಲ್ಲ ತಾಲೂಕಗಳ ಸಮಾಜ ಬಾಂಧವರು ಭಾಗವಹಿಸಿ, ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರಜನಿಕಾಂತ ದೇಸಾಯಿ, ರುದ್ರಗೌಡ ಪೊಲೀಸ್ಪಾಟೀಲ, ನಿಂಗಪ್ಪ ಪ್ಯಾಟಿ ಮಾತನಾಡಿದರು. ಸಭೆಯಲ್ಲಿ ಚನ್ನಪ್ಪ ಕರೆಯತಿನ, ವಸಂತಗೌಡ ಪಾಟೀಲ, ಶ್ರೀಕಾಂತಗೌಡ ಪಾಟೀಲ, ಜುಂಜನಗೌಡ ಪಾಟೀಲ. ಮಹಾದೇವಪ್ಪ ಕಟಗಿ, ದೇವೆಂದ್ರಪ್ಪ ಮರಳಿಹಳ್ಳಿ, ಮಂಜುನಾಥ ಗೌರಿ, ಪರಮೇಶ ರಿತ್ತಿ, ಶಿವಾನಂದ ಬನ್ನಿಮಟ್ಟಿ, ಭೀಮಣ್ಣ ಹುಲ್ಲೂರ, ಶಂಕ್ರಣ್ಣ ದೊಡ್ಡಗೌಡ್ರ ಸೇರಿದಂತೆ ಅನೇಕರಿದ್ದರು.
ವಿದ್ಯೆ ದೊರಕಿಸಲು ಅಸಕ್ತರಾಗಿರುವ ತಂದೆ-ತಾಯಿಗಳು ಶ್ರೀಮಠದಿಂದ ಮಕ್ಕಳಿಗೆ ಉತ್ತಮ ವಿದ್ಯೆಗಾಗಿ ಸಹಾಯ ಮಾಡುತ್ತಿದೆ. ಪಂಚದಾಸೋಹ ಸೇವೆಯನ್ನು ಮಾಡುವ ಕಾರ್ಯವನ್ನು ಮಠದಿಂದ ಮಾಡಲಾಗುತ್ತಿದೆ ಎಂದು ನುಡಿದ ಅವರು, ಪಂಚಮಸಾಲಿ ಸಮಾಜವನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಅಂತವರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಶ್ರೀಗಳು ಸೂಚ್ಯವಾಗಿ ನುಡಿದರು.