ಉಡುಪಿ: ಕ್ಯಾನ್ಸರ್ನಿಂದ ನಿಧನರಾದ ನಟ ಹರೀಶ್ ರಾಯ್ ಅವರ ಅಂತ್ಯಕ್ರಿಯೆ ಇಂದು ಉಡುಪಿಯಲ್ಲಿ ಬ್ರಾಹ್ಮಣ ಸಂಪ್ರದಾಯದ ವಿಧಿವಿಧಾನದಲ್ಲಿ ನೆರವೇರಿತು.
ಅಂಬಲಪಾಡಿಯ ಮೂಲ ಮನೆಯಲ್ಲಿ ತುಳು ಶಿವಳ್ಳಿ ಮಹತ್ವ ಬ್ರಾಹ್ಮಣ ಸಂಪ್ರದಾಯದ ಮೂಲಕ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು. ಕುಟುಂಬಸ್ಥರು ತುಳಸಿ ಕಟ್ಟೆ ಸಮೀಪ ಪಾರ್ಥಿವ ಶರೀರವನ್ನು ಶುಚಿಗೊಳಿಸಿ, ತೀರ್ಥವನ್ನು ನೀಡಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು.
ಉಡುಪಿಯ ಬೀಡಿನಗುಡ್ಡೆದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಸಹೋದರ ಸತೀಶ್, ಪುತ್ರರು ರೋನೆತ್ ರಾಯ್, ರೋಷನ್ ರಾಯ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ಮತ್ತು ಕುಟುಂಬದ ಸದಸ್ಯರು ಅಂತಿಮ ನಮನ ಸಲ್ಲಿಸಿದರು. ರಾಯ್ ಅವರ ಪ್ರೀತಿಯ ನಾಯಿ ಕೂಡ ಅಂತಿಮ ದರ್ಶನ ಪಡೆಯಿತು.
ಹರೀಶ್ ಆಚಾರ್ಯ ಉಡುಪಿಯ ಪ್ರತಿಷ್ಠಿತ ನೊವೆಲ್ಟಿ ಕುಟುಂಬಕ್ಕೆ ಸೇರಿದವರು. ‘ಓಂ’ ಚಿತ್ರದ ನಂತರ ಅವರು ಹರೀಶ್ ರಾಯ್ ಎಂಬ ಹೆಸರಿನಿಂದ ಪರಿಚಿತರಾದರು. ಪೋಷಕ ನಟನಾಗಿ ಮಿಂಚಿದ್ದ ಹರೀಶ್ ರಾಯ್ ಇನ್ನೂ ನೆನಪು ಮಾತ್ರ.


