ಹೆಜ್ಜೆ ಗುರುತು ಉಳಿಯುವಂತೆ ಕಾಯಕವಿರಬೇಕು

0
'Heart touching' Guruvandana programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸರ್ಕಾರಿ ಕಾಲೇಜುಗಳಲ್ಲಿ ಓದುವವರಲ್ಲಿ ಶೇ.90ರಷ್ಟು ಜನ ಬಡವರ, ರೈತರ ಮಕ್ಕಳು. ಅದರಲ್ಲೂ ಗ್ರಾಮೀಣ ಪ್ರದೇಶ ಹಿನ್ನೆಲೆಯುಳ್ಳವರು. ಅವರಿಗೂ ಖಾಸಗಿ ಕಾಲೇಜುಗಳಲ್ಲಿ ಸಿಗುವ ಸೌಲಭ್ಯಗಳು ಸಿಗುವಂತಾಗಲು ತಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾಗಿ ಡಾ. ಎಸ್.ಎಫ್. ಸಿದ್ನೇಕೊಪ್ಪ ಹೇಳಿದರು.

Advertisement

ಬೆಟಗೇರಿ ಹೊರವಲಯದ ನಾಗಸಮುದ್ರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯರಾಗಿರುವ ಡಾ. ಎಸ್.ಎಫ್. ಸಿದ್ನೇಕೊಪ್ಪ ಅವರು ಜೂ.30ರಂದು ನಿವೃತ್ತಿಗೊಳ್ಳಲಿರುವ ನಿಮಿತ್ತ ಶನಿವಾರ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಹೃದಯಸ್ಪರ್ಶಿ’ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹಿಂದೆಲ್ಲ ಇಂದಿನಂತೆ ಸಂಪರ್ಕಕ್ಕೆ 4ಜಿ, 5ಜಿ ಇರಲಿಲ್ಲ. ಅಂದು ವಿದ್ಯಾರ್ಥಿಗಳ ಹಿಂದೆ ‘ಗುರೂ’ಜಿ ಇದ್ದರು. ಆ ಕಾರಣಕ್ಕೆ ‘ಶಿಕ್ಷಕರು’ ನಮಗೆ ಕರ್ಣನ ಕವಚ ಇದ್ದಂತೆ. ಅವರನ್ನು ಸದಾ ಗೌರವಿಸಬೇಕು ಎಂದು ಹೇಳಿದ ಅವರು, ನಿವೃತ್ತಿ ಸರ್ಕಾರದ ನಿಯಮ. ಆದರೆ, ನಮ್ಮ ಬಳಿಕವೂ ನಮ್ಮ ಹೆಜ್ಜೆ ಗುರುತುಗಳು ಉಳಿಯುವಂತೆ ನಮ್ಮ ಕಾಯಕ ಇರಬೇಕು. ಆ ಸಂತೃಪ್ತಿ ನನ್ನದಾಗಿದೆ ಎಂದು ಹೇಳಿ, ನನಗೆ ಅತಿಥಿ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ನೀಡಿದ ಸಹಕಾರ ಮರೆಯಲಾರೆ ಎಂದರು.

ಡಾ. ಎಸ್.ಎಫ್. ಸಿದ್ನೇಕೊಪ್ಪ ಅವರ ನಿವೃತ್ತಿ ನಿಮಿತ್ತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನರೇಗಲ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಲ್. ಗುಳೇದಗುಡ್ಡ, ಪ್ರೊ. ಶೇಷಾದ್ರಿ, ಪ್ರೊ. ಮಹಾಂತೇಶ ಸೇರಿ ಹಲವರು ಮಾತನಾಡುತ್ತಿದ್ದಾಗ ಕೆಲ ಹೊತ್ತು ಭಾವುಕರಾದರು. ಕೆಲ ವಿದ್ಯಾರ್ಥಿಗಳು ಡಾ.ಸಿದ್ನೇಕೊಪ್ಪ ಅವರ ಕುರಿತು ಕವನ ವಾಚನ ಮಾಡಿದರೆ, ಮತ್ತೆ ಕೆಲವರು ಅನಿಸಿಕೆಗಳನ್ನು ಹಂಚಿಕೊಂಡರು.

ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ, ಡಾ. ಆರ್.ಎಂ. ಕಲ್ಲನಗೌಡ್ರ, ಪ್ರೊ. ಕಾಶಪ್ಪನವರ, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನಂತಗೌಡ ಆರ್.ಕಲ್ಮನಿ ಸೇರಿ ಹಲವರು ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ.ಹೆಬ್ಬಳ್ಳಿ, ಪತ್ರಕರ್ತ ಜಗದೀಶ ಕುಲಕರ್ಣಿ ಸೇರಿ ಹಲವರು ವೇದಿಕೆಯಲ್ಲಿದ್ದರು. ಬಳಿಕ ಡಾ. ಎಸ್.ಎಫ್. ಸಿದ್ನೇಕೊಪ್ಪ ಅವರಿಗೆ ವಿದ್ಯಾರ್ಥಿಗಳು ಗುರುವಂದನೆ ಮೂಲಕ ಸನ್ಮಾನಿಸಿ, ಗೌರವಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ಖಲೀಲ್ ಅಹ್ಮದ್ ಚಿಕ್ಕೇರೂರ ಅವರಿಗೆ ಡಾ. ಎಸ್.ಎಫ್. ಸಿದ್ನೇಕೊಪ್ಪ ಅವರು ಪ್ರಾಚಾರ್ಯ ಹುದ್ದೆಯನ್ನು ಹಸ್ತಾಂತರ ಮಾಡಿದರು. ಡಾ.ಕಸ್ತೂರಿ ದಳವಾಯಿ ನಿರೂಪಿಸಿದರು. ಪ್ರೊ. ಉಮಾ ಕಣವಿ ಸ್ವಾಗತಿಸಿದರು. ಡಾ. ಹನಂತಗೌಡ ಆರ್.ಕಲ್ಮನಿ ಅವರು ವಂದಿಸಿದರು.

ಡಾ. ಎಸ್.ಎಫ್. ಸಿದ್ನೇಕೊಪ್ಪ ಅವರನ್ನು ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾರ್ಥಿನಿಯರು, ಮಹಿಳಾ ಪ್ರಾಧ್ಯಾಪಕರು ‘ಪೂರ್ಣಕುಂಭ’ದೊಂದಿಗೆ ಸ್ವಾಗತಿಸಿದ್ದು ವಿಶೇಷವಾಗಿತ್ತು. ಮತ್ತೊಂದೆಡೆ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಅಷ್ಟೇ ಅಲ್ಲ, ಇಡೀ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರವರ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ಗಮನ ಸೆಳೆದರು.

ಹಲವರ ಸ್ಮರಣೆ 

ನನಗೆ ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಎಸ್.ವಿ. ಸಂಕನೂರ ಅವರಾದಿಯಾಗಿ ಹಲವರು ಜ್ಞಾನ ಕೊಟ್ಟರೆ, ಸಚಿವರಾದ ಎಚ್.ಕೆ. ಪಾಟೀಲ ಅವರು ಉಪನ್ಯಾಸಕರಾಗಲು ನೆರವು ನೀಡಿ, ಬದುಕು ಕಟ್ಟಿಕೊಟ್ಟವರು. ಇದರ ಮಧ್ಯೆ ನನ್ನ ಚಿಕ್ಕಪ್ಪ ದಿ.ರಾಜೇಸಾಬ ಸಿದ್ನೆಕೊಪ್ಪ, ತಂದೆ-ತಾಯಿ ಸೇರಿ ಇಡೀ ನನ್ನ ಕುಟುಂಬ ನನ್ನ ಏಳ್ಗೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ ಎಂದು ಡಾ. ಎಸ್.ಎಫ್. ಸಿದ್ನೇಕೊಪ್ಪ ನೆನೆದರು.


Spread the love

LEAVE A REPLY

Please enter your comment!
Please enter your name here