ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಸಮಾಜದ ಒಳಿತಿಗಾಗಿ ಉತ್ತಮ ಸಂದೇಶಗಳನ್ನು ನೀಡಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಸ್ತ ಸ್ತ್ರೀಕುಲಕ್ಕೆ ಎಂದೆಂದಿಗೂ ಮಾದರಿಯಾಗಿದ್ದಾರೆ. ಅವರ ತತ್ವ-ಸಿದ್ದಾಂತ ಹಾಗೂ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ರಚನೆ, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಭಾನುವಾರ ಶಿರಹಟ್ಟಿ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಕೊನೆಯ ದಿನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮನ ಆಶೀರ್ವಾದ ಇರುವ ರೆಡ್ಡಿ ಸಮಾಜವು ನಂಬಿಕೆಗೆ ಅರ್ಹವಾಗಿದ್ದು, ಪ್ರತಿಯೊಂದು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸದಾಕಾಲ ಕಾಯಕದಲ್ಲಿ ಶ್ರದ್ದೆಯಿಟ್ಟು ಇಡೀ ಮನುಕುಲಕ್ಕೆ ಆದರ್ಶಳಾಗಿ ಬದುಕಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಬದುಕು ಸರ್ವರಿಗೂ ಸ್ಪೂರ್ತಿ ಎಂದ ಅವರು, ಸಾಕ್ಷಾತ್ ಮಲ್ಲಿಕಾರ್ಜುನನ್ನು ಒಲಿಸಿಕೊಂಡಿರುವ ಹೇಮರಡ್ಡಿ ಮಲ್ಲಮ್ಮ ಮಹಾಸಾದ್ವಿಯಾಗಿದ್ದಾರೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಇವರ ಜೀವನವು ಅವಿಸ್ಮರಣೀಯವಾಗಿದೆ. ಪ್ರತಿಯೊಬ್ಬ ಮಹಿಳೆಗೂ ಆದರ್ಶಪ್ರಾಯವಾದ ವ್ಯಕ್ತಿತ್ವ ಹೊಂದಿದ ಹೇಮರಡ್ಡಿ ಮಲ್ಲಮ್ಮಳ ಚರಿತ್ರೆಯನ್ನು ಪ್ರತಿಯೊಬ್ಬ ಮಹಿಳೆಯೂ ಅರಿತುಕೊಳ್ಳಬೇಕು ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಮಹೇಂದ್ರ ಮುಂಡವಾಡ, ಸುಜಾತ ದೊಡ್ಡಮನಿ, ಎಂ.ಡಿ. ಬಟ್ಟೂರ, ಹೊನ್ನಪ್ಪ ಶಿರಹಟ್ಟಿ, ಎನ್.ಎನ್. ಗೋಕಾವಿ, ಲಕ್ಷö್ಮಣಗೌಡ ಪಾಟೀಲ, ಜಗದೀಶ ಬಟ್ಟೂರ, ಅಜ್ಜು ಪಾಟೀಲ, ಸಿದ್ದು ಪಾಟೀಲ, ಸುರೇಶ ಅಕ್ಕಿ ಹಾಗೂ ಗ್ರಾಮದ ಸಮಸ್ತ ಹಿರಿಯರು ಇದ್ದರು.
ಮಲ್ಲಮ್ಮ ಪ್ರತಿಪಾದಿಸಿದ ಭಕ್ತಿ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಏನೇ ಕಷ್ಟ ಬಂದರೂ ಅದಕ್ಕೆ ಹೆದರದೇ ಪರರಿಗೆ ಒಳಿತು ಮಾಡುವ ಗುಣ ಅವರಲ್ಲಿತ್ತು. ಅಂತಹ ಸದ್ಗುಣಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಏನೇ ಕಷ್ಟನಷ್ಟ ಅನುಭವಿಸಿದರೂ ಹೇಮರಡ್ಡಿ ಮಲ್ಲಮ್ಮ ಮಾತ್ರ ಇತರರಿಗೆ ಒಳಿತನ್ನು ಬಯಸುವ ವಿಶಾಲ ಮನೋಭಾವ ಹೊಂದಿದ್ದರು. ಅವರು ಕಾಯಕ ಮತ್ತು ದಾಸೋಹಕ್ಕೆ ವಿಶೇಷ ಒತ್ತು ನೀಡಿದ್ದರು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.