HomeAgricultureಸಾವಯವ ಕೃಷಿ ಮೂಲಕ ಪ್ರಕೃತಿಗೆ ಹಿಂತಿರುಗಿ

ಸಾವಯವ ಕೃಷಿ ಮೂಲಕ ಪ್ರಕೃತಿಗೆ ಹಿಂತಿರುಗಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ನಮ್ಮ ದೇಶದಲ್ಲಿ ಕೃಷಿ ಕಾಯಕ ಮಾಡುವ ರೈತನಿಲ್ಲದಿದ್ದರೆ ಎಲ್ಲರೂ ತುತ್ತು ಅನ್ನಕ್ಕಾಗಿ ನರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದ್ದರಿಂದ ಕೃಷಿಗೆ ಪ್ರಥಮ ಆದ್ಯತೆ ನೀಡಿಬೇಕಾಗಿದೆ. ಹಣದ ವ್ಯಾಮೋಹದಲ್ಲಿ ತೇಲುತ್ತಿರುವ ಯುವ ಜನಾಂಗ ಪ್ರಕೃತಿ ಮಡಿಲಿಗೆ ಹಿಂದಿರುಗುವ ಅನಿವಾರ್ಯತೆ ಇದೆ ಎಂದು ದಾವಣಗೇರಿಯ ಕೃಷಿ ತಜ್ಞ ವೆಂಕಟ ರಾಮಾಂಜನಯ ಸ್ವಾಮಿ ಹೇಳಿದರು.

ಅವರು ಪಟ್ಟಣದ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಈಚೆಗೆ ನಡೆದ ವಿವಿಧ ಜಿಲ್ಲೆಯ ಕೃಷಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ಎದುರಿಸುತ್ತಿರುವ ಆರ್ಥಿಕ, ಆರೋಗ್ಯದ ಸಮಸ್ಯೆಗಳಿಗೆ ಪ್ರಕೃತಿ ಹಾಗೂ ಕೃಷಿ ಪರಿಹಾರ ನೀಡಲಿದೆ. ಪರಿಸರದಲ್ಲಿ ಸಿಗುವ ಔಷಧಿ ಗುಣಗಳ ನಾಟಿ ವೈದ್ಯಕೀಯ ಪದ್ಧತಿ ಭಾರತದ ಶ್ರೇಷ್ಠ ಪರಂಪರೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಪ್ರಯತ್ನಗಳು ನಡೆಯಬೇಕು ಎಂದರು. ನಾಟಿ ಔಷಧಿ ಅನೇಕ ರೋಗಗಳಿಗೆ ಸುಲಭವಾಗಿ ನಾಟುವುದರಿಂದ ಆ ಹೆಸರು ಬಂದಿದೆ. ಇದಕ್ಕೆ ಸರಿಸಾಟಿ ಬೇರೆ ಯಾವುದೂ ಇಲ್ಲ, ಭೌತಿಕ ಬಡತನ ಹಾಗೂ ಸಂಕುಚಿತ ಭಾವನೆಯಿಂದ ಈ ಪದ್ಧತಿ ಮೊಟಕುಗೊಳ್ಳುತ್ತಿದೆ ಎಂದರು.

ಕಲಘಟಗಿಯ ನೈಸರ್ಗಿಕ ಕೃಷಿಕ ನಿಂಗಯ್ಯ ಹಿರೇಮಠ ಮಾತನಾಡಿ, ನಮ್ಮ ಪೂರ್ವಜರ ಕಾಲದಿಂದಲೂ ಸಾವಯವ ಗೊಬ್ಬರಗಳನ್ನು ಬಳಸಿ ಬೇಸಾಯ ಮಾಡುತ್ತಾ ಬಂದಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಗೆ ಉಪಯುಕ್ತವಲ್ಲದ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವ ಮೂಲಕ ಭೂಮಿಯ ಫಲವತ್ತತೆ ಹಾಗೂ ಸಮುದಾಯದ ಆರೋಗ್ಯವನ್ನು ಹಾಳು ಮಾಡಲಾಗುತ್ತದೆ. ಆದ್ದರಿಂದ ರೈತರು ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗೆ ಮರಳಬೇಕು ಎಂದರು. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ತರಕಾರಿ ಹಾಗೂ ಆಹಾರಧಾನ್ಯ ಸೇವಿಸುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಈ ವೇಳೆ ಕೋಟುಮಚಗಿ ಸಾವಯವ ಕೃಷಿ ವೀರೇಶ ನೇಗಲಿ, ಬಸವರಾಜ ದಿಂಡೂರ, ಜಿ.ಪಿ. ಪಾಟೀಲ, ಬಾವಿ ಬೆಟ್ಟಪ್ಪ, ಸೋಮಣ್ಣ ಡಾಣಗಲ್ಲ, ವೀರಣ್ಣ ಕರಿಬಿಷ್ಮಿ, ಶಕುಂತಲಾ ಸಿಂಧೂರ, ಜಿ.ಎ. ಪಾಟೀಲ ಇದ್ದರು.

ಕೃಷಿಯಲ್ಲಿ ಸಾಧನೆ ಮಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೋಪಾಲ, ದಾವಣಗೇರಿಯ ಕೃಷಿ ತಜ್ಞ ವೆಂಕಟ ರಾಮಾಂಜನಯ ಸ್ವಾಮಿ, ಶಿರಹಟ್ಟಿಯ ಸಾವಯವ ಕೃಷಿಕ ಬಸವರಾಜ ನಾವಿ, ಬೆಳಗಾವಿಯ ಸಾವಯವ ಕೃಷಿಕ ತುಕಾರಾಮ ನಾಯಕ, ಕಲಘಟಗಿಯ ನೈಸರ್ಗಿಕ ಕೃಷಿಕ ನಿಂಗಯ್ಯ ಹಿರೇಮಠ, ರಟ್ಟಿಹಳ್ಳಿಯ ಕೃಷಿತಜ್ಞೆ ಸೌಭಾಗ್ಯ ಬಸನಗೌಡ್ರ ಇವರಿಗೆ ಸನ್ಮಾನಿಸಲಾಯಿತು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!