ಬೆಂಗಳೂರು: ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠವನ್ನು ಸ್ಥಾಪಿಸಿದ್ದು ನಾನು.
ನಾನು ಮೊದಲಿಂದಲೂ ಸನಾತನವಾದಿ RSS ಗೆ ವಿರುದ್ಧ, ಜಾತಿ ವ್ಯವಸ್ಥೆ ಮತ್ತು ಮೌಡ್ಯಕ್ಕೆ ವಿರುದ್ಧ ಇದ್ದೇನೆ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ತಿಳಿಸಿದರು. ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಂಘದ ಕಟ್ಟಡದಲ್ಲಿ ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು. ಸಮಾಜವನ್ನು ಒಡೆದು ಜಾತಿ ವ್ಯವಸ್ಥೆ ರೂಪಿಸಿದ ಸಿದ್ಧಾಂತ RSS ನದ್ದು. ಈ ಸಿದ್ಧಾಂತ ಶ್ರಮಿಕ ಜಾತಿ, ವರ್ಗಗಳ ವಿರೋಧಿ. ಅದಕ್ಕೇ ನಾನು RSS ಅನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಇದೇ ಕಾರಣಕ್ಕೆ ಕಾಗಿನೆಲೆ ಪೀಠ ಎಲ್ಲಾ ಶೋಷಿತ ಸಮುದಾಯಗಳ ಪೀಠ ಆಗಬೇಕು ಎನ್ನುವುದನ್ನು ಪ್ರತಿಪಾದಿಸಿದ್ದೆ ಎಂದರು.
ಈದ ಇದೇ ನೂರು ವರ್ಷದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರದೇಶ ಕುರುಬರ ಸಂಘದಿಂದ ಬೇಡಿಕೆ ಮತ್ತು ಒತ್ತಾಯ ಬಹಳ ವರ್ಷಗಳಿಂದ ಇತ್ತು. ಈಗ ಎಲ್ಲರನ್ನೂ ಒಪ್ಪಿಸಿ ಹಳೆ ಕಟ್ಟಡ ನೆಲಸಮ ಮಾಡಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕೂಡ ಆಗಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ 18 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದರು.
ಹಳೆ ಕಟ್ಟಡದಲ್ಲಿದ್ದ ಹಾಸ್ಟೆಲ್ ನಲ್ಲಿ ಓದಿದವರು ಒಳ್ಳೊಳ್ಳೆ ಅಧಿಕಾರಿಗಳಾಗಿದ್ದಾರೆ. ಜಡ್ಜ್ ಗಳೂ ಆಗಿದ್ದಾರೆ. ನಾನು 1983 ರಲ್ಲಿ ಶಾಸಕನಾಗಿ 1984 ರಲ್ಲಿ ಮಂತ್ರಿ ಆದೆ. ನಾನು ಸಾರಿಗೆ ಮಂತ್ರಿ ಆಗಿದ್ದಾಗ 1988 ರಲ್ಲೇ ಕನಕದಾಸರ 500ನೇ ಜಯಂತ್ಸೋವವನ್ನು ಆಚರಣೆ ಮಾಡಿಸಿದೆ. ಇದೇ ಸಂದರ್ಭದಲ್ಲಿ ಸಮಾಜಕ್ಕೊಂದು ಗುರುಪೀಠ ಬೇಕು ಎಂದು ತೀರ್ಮಾನಿಸಿದೆ. ಆಗ ಸಂಘದ ಕಟ್ಟಡದ ಮೇಲೆ 3 ಕೋಟಿ ರೂಪಾಯಿ ಸಾಲ ಇತ್ತು. ಆ ಸಾಲದ ಸುಳಿಯಿಂದ ಸಂಘವನ್ನು ಬಿಡಿಸಿದ್ದು ನಾವು. ಇದು ಇತಿಹಾಸ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಹೊಸ ಕಟ್ಟಡದಲ್ಲೂ ಹಾಸ್ಟೆಲ್ ಇರಲಿದೆ. ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ ಐದನೇ ತರಗತಿಗೆ ಸೇರಿಸದೇ ಹೋಗಿದ್ದರೆ ನಾನು ವಕೀಲನೂ ಆಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಬಳಿಕ ಪ್ರೊ.ನಂಜುಂಡಸ್ವಾಮಿ ಅವರ ಕಾರಣದಿಂದ ರಾಜಕೀಯಕ್ಕೆ ಬಂದೆ.
ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬ ಸಂಘದ ಕಟ್ಟಡವೂ ಉಳಿಯುತ್ತಿರಲಿಲ್ಲ, ಕಾಗಿನೆಲೆ ಪೀಠವೂ ಆಗುತ್ತಿರಲಿಲ್ಲ, ರಿಯಲ್ ಎಸ್ಟೇಟ್ ರೌಡಿಗಳಿಂದ ಬೈರಪ್ಪನ ಗುಡಿ ಮತ್ತು ಸಮಾಜದ ಭೂಮಿ, ಕಟ್ಟಡಗಳನ್ನು ಉಳಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಇತಿಹಾಸದ ಘಟನೆಗಳನ್ನು ಒಂದೊಂದಾಗಿ ವಿವರಿಸಿದರು.
ಸರ್ಕಾರದಿಂದ 600 ಕುರುಬ ಸಮುದಾಯ ಭವನಗಳನ್ನು ಮಾಡಲು ಮುಂದಾಗಿದ್ದು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಸೇರಿ ರಾಜ್ಯದ ಹತ್ತು ಹಲವು ಕಡೆಗಳಲ್ಲಿ ಸಂಘಕ್ಕೆ ಜಾಗ-ಕಟ್ಟಡ ಉಳಿಸಿಕೊಟ್ಟಿದ್ದೇನೆ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮಾಡಿದ್ದು ನಾನೇ, ಸಂಗೊಳ್ಳಿ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾನೇ. ಈಗ ನನಗೂ ಮುಕುಡಪ್ಪನಿಗೂ ಆಗುವುದಿಲ್ಲ. ಆದರೆ ಕುರುಬ ಸಮಾಜಕ್ಕೆ ಆಸ್ತಿ ಉಳಿಸಿ, ಬೆಳೆಸುವ ಕಾರ್ಯದಲ್ಲಿ ಮುಕುಡಪ್ಪ ಸೇರಿ ಶಿವಣ್ಣ, ಮಾಸ್ತಿ, ಸಿದ್ದಲಿಂಗಯ್ಯ, ನಾಗಣ್ಣ ರೀತಿಯ ಹಲವರು ಜೊತೆಗೆ ನಿಂತು ಸಹಕಾರ ಮಾಡಿದರು.
ಈ ಇತಿಹಾಸ ಗೊತ್ತಿದ್ದವರು ಬಹಿರಂಗವಾಗಿ ಮಾತಾಡಬೇಕಿತ್ತು. ಅವರ್ಯಾರೂ ಮಾತಾಡದ ಕಾರಣಕ್ಕೆ, ನಾನು ಮಾತಾಡಬಾರದು ಅಂದುಕೊಂಡಿದ್ದವನು ಎಲ್ಲವನ್ನೂ ಮಾತಾಡಬೇಕಾಗಿ ಬಂತು ಎಂದರು. ಯಾರು ಮಾತಾಡಲಿ, ಬಿಡಲಿ ಇದು ಸತ್ಯ. ಇದು ಇತಿಹಾಸ. ಒಟ್ಟಿನಲ್ಲಿ ಸಮಾಜದ ಸಂಘಟನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.


