ಬೆಂಗಳೂರು :- ಬಾಂಡ್ಲಿ ಫಾದರ್ ನಿನ್ನ ಓಡನಾಟ ನೋಡಿ ಭಾವುಕರಾದೆ ಎಂದು ಹೇಳುವ ಮೂಲಕ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನಕ್ಕೆ ನಟ ಜಗ್ಗೇಶ್ ಭಾವುಕರಾಗಿದ್ದಾರೆ. ಬ್ಯಾಂಕ್ ಜನಾರ್ಧನ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕನ್ನಡ ಚಿತ್ರರಂಗವೇ ಶಾಕ್ಗೆ ಒಳಗಾಗಿದೆ. ಅದರಲ್ಲೂ ಬ್ಯಾಂಕ್ ಜನಾರ್ಧನ್ ನಿಧನದ ವಿಚಾರ ತಿಳಿಯುತ್ತಿದ್ದಂತೆ ನವರಸ ನಾಯಕ ಜಗ್ಗೇಶ್ ಅವರು ಟ್ವೀಟ್ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಜಗ್ಗೇಶ್, ಆತ್ಮೀಯ ಗೆಳೆಯ ಜನಾರ್ಧನ್ ಹೋಗಿ ಬಾ. ನಾವಿಬ್ಬರು ಪಾತ್ರಕ್ಕಾಗಿ ಹಸಿದು ಅಲೆದು ಪಡೆದು ಗೆದ್ದವರು. ನಾನು ನಿನ್ನ ಚಿತ್ರದಲ್ಲಿ ಕರೆಯುತ್ತಿದ್ದ ಬಾಂಡ್ಲಿ ಫಾದರ್ ಪದ ನಿನ್ನ ಓಡನಾಟ ನೆನೆದು ಭಾವುಕನಾದೆ. ಆತ್ಮಕ್ಕೆ ಶಾಂತಿ ಅಂತ ಬರೆದುಕೊಂಡಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅವರು ವಿಧಿವಶರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಟ ಬ್ಯಾಂಕ್ ಜನಾರ್ಧನ್ ಅವರು ಮಧ್ಯರಾತ್ರಿ 2.30ರ ಸುಮಾರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.