ಬೆಳಗಾವಿ: ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಸದನದ ಒಳಗಡೆ ಉತ್ತರ ಕೊಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಹಳ ಒಳ್ಳೆಯ ಬೆಳವಣಿಗೆ ಏನಂದ್ರೆ ಸಿದ್ದರಾಮಯ್ಯ ಅವರಿಗೆ ಸಿಬಿಐ ಬಗ್ಗೆ ವಿಶ್ವಾಸ ಬಂದಿದೆ.
ಪ್ರಿಯಾಂಕ್ ಖರ್ಗೆ ಸದನದ ಒಳಗಡೆ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಸಿಎಂ ಇದನ್ನು ಬೆಂಬಲಿಸಿದ್ದಾರೆ. ಆದರೆ ನನಗೆ ಇಬ್ಬರ ಮೇಲೆ ಆಕ್ರೋಶ ಇಲ್ಲ. ಬದಲಾಗಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮರುಕ ಬರುತ್ತಿದೆ ಎಂದು ಹೇಳಿದರು.
ಇನ್ನೂ ಸಿದ್ದರಾಮಯ್ಯ ಬಹಳ ಪ್ರಾಮಾಣಿಕರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟುತ್ತಿದ್ದರು. ಆದರೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮೂಡಾ ಹಗರಣದಲ್ಲಿ ಸಿಕ್ಕಿ ಹಾಕೊಂಡಿದ್ದಾರೆ. ಅದರಿಂದ ನರಳುತ್ತಾ ಭ್ರಷ್ಟಾಚಾರದಿಂದ ಮುಕ್ತಿ ಪಡೆಯಲು ಪರಿತಪಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಹೀಗಾಗಿ ಇದೀಗ ಸಚಿವರ ಮೂಲಕ ಸದನದಲ್ಲಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ಬೆಂಬಲಿಸಿದ್ದಾರೆ. ಸದನದ ಒಳಗಡೆ ನಾನು ಚರ್ಚೆ ಮಾಡಿ ಅಲ್ಲೇ ಈ ಆರೋಪಕ್ಕೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ರು.