ವಿಜಯಸಾಕ್ಷಿ ಸುದ್ದಿ, ಗದಗ : ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮತ್ತು ಉದ್ಯೋಗ ಅರಸಿ ಬೇರೆ ಜಿಲ್ಲೆ, ಬೇರೆ ರಾಜ್ಯ, ವಿದೇಶಗಳಿಗೆ ಹೋಗಲು ಆಸಕ್ತಿ ಇದ್ದರೂ ಪಾಲಕರು ಅವರನ್ನು ಕಳಿಸಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಕೆಎಲ್ಇ ಆರ್ಟ್ಸ & ಕಾಮರ್ಸ್ ಕಾಲೇಜಿನ ಪ್ರಾಚಾರ್ಯೆ ಡಾ. ಎ.ಕೆ. ಮಠ ಹೇಳಿದರು.
ನಗರದ ಕೆ.ಎಲ್.ಇ. ಆರ್ಟ್ಸ್ & ಕಾಮರ್ಸ್ ಕಾಲೇಜ್ನಲ್ಲಿ ದೇಶಪಾಂಡೆ ಫೌಂಡೇಶನ್ ವತಿಯಿಂದ ಸ್ಕಿಲಿಂಗ್ ಅಂತರಂಗದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಹೋಗಬೇಕಾದರೆ ಪಾಲಕರು ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಇಂದಿನ ಕಷ್ಟಕರ ಕಾಲದಲ್ಲಿ ಮಕ್ಕಳನ್ನು ಕೇವಲ ಅಂಕಗಳ ಆಧಾರದ ಮೇಲೆ ಗುರುತಿಸುವುದನ್ನು ಬಿಟ್ಟು ಅವರಲ್ಲಿರುವ ಪ್ರತಿಭೆಯನ್ನು ನೋಡಬೇಕಾಗಿದೆ ಎಂದರು.
ದೇಶಪಾಂಡೆ ಫೌಂಡೇಶನ್ ಗದಗ ಕ್ಲಸ್ಟರ್ ಮುಖ್ಯಸ್ಥರಾದ ರೆಹಮಾನ ಮಾತನಾಡಿ, ದೇಶಪಾಂಡೆ ಫೌಂಡೇಶನ್ ಆಯೋಜಿಸಿರುವ ಈ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಪಾಲಕರು ಹೆಚ್ಚು ಗಮನಕೊಟ್ಟು ತಮ್ಮ ಜೀವನದಲ್ಲಿ ಮುಂದೆ ಬರಬೇಕೆಂದು ನುಡಿದರು.
ತರಬೇತುದಾರರಾದ ತೃಪ್ತಿ ಕೊಠಾರಿಯಾ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ವಿನಾಯಕ, ಮಂಜುನಾಥ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.