ಕಷ್ಟಪಟ್ಟು ಓದಿದರೆ ಉಜ್ವಲ ಭವಿಷ್ಯವಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣವು ಬಹುಮುಖ್ಯ ಪಾತ್ರ ವಹಿಸುತ್ತದೆ. ಪ್ರತಿಯೊಂದು ಸಮಸ್ಯೆಗೆ ಶಿಕ್ಷಣವು ಕೀಲಿಕೈ ಇದ್ದಂತೆ. ಹೀಗಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದರೆ ಮುಂದೆ ಜೀವನದಲ್ಲಿ ಇಷ್ಟ ಬಂದಂತೆ ಬದುಕಬಹುದು ಎಂದು ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಆದ ಪರಶುರಾಮಸಾ ಟಿ.ಮಿಸ್ಕಿನ್ ಹೇಳಿದರು.

Advertisement

ಅವರು ಬೆಟಗೇರಿಯ ಎಸ್.ಎಸ್.ಕೆ ಸಮಾಜದ ಆಶ್ರಯದಲ್ಲಿ ಡಾ. ವಿ.ಎನ್. ಬದಿ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಗದಗ ಜಿಲ್ಲಾ ಎಸ್.ಎಸ್.ಕೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ `ಆರೋಗ್ಯ ಸರಳ ಸಂರಕ್ಷಕ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ದೂರದ ಅಮೆರಿಕಾದಲ್ಲಿದ್ದರೂ ಡಾ. ಎನ್.ವಿ. ಬದಿಯವರು ತಮ್ಮ ತವರು ಜಿಲ್ಲೆಯ ಎಸ್.ಎಸ್.ಕೆ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದರೊಂದಿಗೆ ಅವರ ಕೊಡುಗೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಹುಬ್ಬಳ್ಳಿಯ ಡಾ. ರಮೇಶ ಬುರಬುರೆ ಮಾತನಾಡಿ, ಶಿಕ್ಷಣವು ಅಜ್ಞಾನವನ್ನು ಹೋಗಲಾಡಿಸಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರಮವಹಿಸಿ ಓದಬೇಕೆಂದರು.

ಹುಬ್ಬಳ್ಳಿಯ ಗೃಹ ವೈಭವದ ಮಾಲಕರಾದ ವಿಷ್ಣುಸಾ ಟಿ. ಬದಿಯವರು ಕೃಷ್ಣಾಸಾ ಆರ್. ಖಟವಟೆ ಸಂಪಾದಿತ `ಆರೋಗ್ಯ ಸರಳ ಸಂರಕ್ಷಕ’ ಕೃತಿ ಬಿಡುಗಡೆ ಮಾಡಿದರು. ಡಾ. ಎನ್.ವಿ. ಬದಿ ಇವರ ಸಹೋದರ ಮನೋಹರ ಬದಿ, ಚೈತನ್ಯ ಆಫ್‌ಸೆಟ್ ಮಾಲಕರಾದ ಅಶೊಕ ಕೆ.ಖಟವಟೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಟಗೇರಿ ಎಸ್.ಎಸ್.ಕೆ ಸಮಾಜದ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಲೋಕನಾಥ ಬಿ.ಕಬಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೃಷ್ಣಾಸಾ ಆರ್. ಖಟವಟೆ ಹಾಗೂ ಬೆಟಗೇರಿ ಎಸ್.ಎಸ್.ಕೆ ಸಮಾಜಕ್ಕೆ 51 ಸಾವಿರ ರೂ ದೇಣಿಗೆ ನೀಡಿದ ಕೊಪ್ಪಳ-ಭಾಗ್ಯನಗರದ ಹಿರಿಯ ಉದ್ಯಮಿ ಅರ್ಜುನಸಾ ಅಂಟಾಳಮರದ ಅವರನ್ನು ಸನ್ಮಾನಿಸಲಾಯಿತು. ಗದಗ ಜಿಲ್ಲಾ ಎಸ್.ಎಸ್.ಕೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಬೆಟಗೇರಿ ಎಸ್.ಎಸ್.ಕೆ ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಚೇರಮನ್ ಜಿ.ವಿ. ಬಸವಾ, ತರುಣ ಸಂಘದ ಅಧ್ಯಕ್ಷ ಎಸ್.ಬಿ. ರಾಯಬಾಗಿ, ಬೆಟಗೇರಿ ಶ್ರೀ ಜಗದಂಬಾ ಮಹಿಳಾ ಮಂಡಳದ ಅಧ್ಯಕ್ಷರಾದ ಸರೋಜಾಬಾಯಿ ಎಚ್.ಕಬಾಡಿ ಉಪಸ್ಥಿತರಿದ್ದರು.

ಜಗದಂಬಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬೆಟಗೇರಿ ಎಸ್.ಎಸ್.ಕೆ ಪಂಚ ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ದತ್ತು ಪವಾರ ಸ್ವಾಗತಿಸಿದರು. ಸಹ ಶಿಕ್ಷಕರಾದ ಗಣಪತಿ ಹೆಗಡೆ ನಿರೂಪಿಸಿದರು. ಸತ್ಯನಾರಾಯಣ ಕಬಾಡಿ ವಂದಿಸಿದರು.

ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಶಂಕರ ಲದವಾ ಅವರು ಮಾತನಾಡಿ, ಯಾವುದೇ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿಯಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಸ್.ಎಸ್.ಕೆ ಸಮಾಜ ಈಗ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


Spread the love

LEAVE A REPLY

Please enter your comment!
Please enter your name here