ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಡಾ. ಸುಧಾಮೂರ್ತಿ ಅವರ ಇನ್ಫೋಸಿಸ್ ಪ್ರತಿಷ್ಠಾನ ಕೇವಲ ಕರ್ನಾಟಕವಷ್ಟೇ ಅಲ್ಲದೆ ದೇಶ-ವಿದೇಶಗಳಲ್ಲಿಯೂ ಕರ್ನಾಟಕದ ಸಂಗೀತ, ಕಲೆ, ಸಾಂಸ್ಕೃತಿಕ ವೈಭವವನ್ನು ವಿಜೃಂಭಿಸುವ ಶ್ರೇಷ್ಠ ಕಾರ್ಯವನ್ನು ಮಾಡುತ್ತಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ವ್ಯವಸ್ಥಾಪಕ ಪ್ರಶಾಂತ ಹೆಗಡೆ ಹೇಳಿದರು.
ಅವರು ಶುಕ್ರವಾರದಿಂದ ಸೋಮೇಶ್ವರ ದೇವಸ್ಥಾನದಲ್ಲಿ ಪ್ರಾರಂಭಗೊಂಡಿರುವ `ಪುಲಿಗೆರೆ ಉತ್ಸವ’ದ ಸಂಜೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇನ್ಫೋಸಿಸ್ ಸಂಸ್ಥೆ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಬಡವರ ಕಲ್ಯಾಣಕ್ಕಾಗಿ ಪ್ರತಿವರ್ಷ 500 ಕೋಟಿ ರೂ ವಿನಿಯೋಗಿಸುತ್ತಿದೆ. ಡಾ. ಸುಧಾಮೂರ್ತಿ ಅವರು ನಾಡಿನ ಪ್ರಾಚೀನ ದೇವಸ್ಥಾನ, ಶಿಲ್ಪಕಲೆ, ಸಾಂಸ್ಕೃತಿಕ ವೈಶಿಷ್ಟ್ಯತೆಯನ್ನು ಉಳಿಸಿ-ಬೆಳೆಸುವ ಅತ್ಯಂತ ಜವಾಬ್ದಾರಿಯುತ ಸೇವೆಯನ್ನು ಮಾಡುತ್ತಿದ್ದಾರೆ. ಅದರಂತೆ ಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಳಿಸಿ ಕಳೆದ 7 ವರ್ಷದಿಂದ ದೇವಸ್ಥಾನದಲ್ಲಿ 3 ದಿನಗಳ ಕಾಲ ಸಂಗೀತ, ನೃತ್ಯ, ಚಿತ್ರ ಸಂಭ್ರಮದ `ಪುಲಿಗೆರೆ ಉತ್ಸವ’ ಆಯೋಜಿಸುತ್ತಾ ಬಂದಿದ್ದಾರೆ. ಈ ಕಾರ್ಯ ನಿರಂತರವಾಗಿ ಮುಂದುವರೆಸುವ ಅವರ ಉದ್ದೇಶಕ್ಕೆ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದರು.
ಮಾರು ಬಿಹಾಗ ರಾಗದಲ್ಲಿ ತಮ್ಮ ಗಾಯನವನ್ನು ಆರಂಭಿಸಿದ ಡಾ.ಅಶೋಕ, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ತಮ್ಮ ಕಂಚಿನ ಕಂಠದ ಮೂಲಕ ಎಲ್ಲರ ಮನಸೆಳೆದರು. ನಂತರ ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ… ವಚನ, ಪುರಂದರ ದಾಸರ ಬಾರೋ ನಮ್ಮ ಮನೆಗೆ… ದಾಸರ ಪದದ ನಂತರ ಶಿಶುನಾಳ ಶರೀಫರ ತತ್ವಪದ ಮುತ್ತು ತಂದೆನ… ಪ್ರಸ್ತುತ ಪಡಿಸಿದರು. ಅದರಲ್ಲೂ ಕಂಚಿನ ಕಂಠ ಹೊಂದಿರುವ ಡಾ.ಅಶೋಕ ಅವರು ನಲವಡಿ ಶ್ರೀಕಂಠ ಶಾಸ್ತಿçಗಳ ರಚನೆಯ ಹೇಮರಡ್ಡಿ ಮಲ್ಲಮ್ಮ ನಾಟಕದ ಆಹಾ ಮಮತೆ ರಂಗಗೀತೆ ಹಿಂದಿನ ನಾಟಕಗಳ ವೈಭವವನ್ನು ಪರಿಚಯಿಸಿದಂತಿತ್ತು.
ಇವರಿಗೆ ಅಲ್ಲಮಪ್ರಭು ಕಡಕೋಳ ತಬಲಾ, ಮಧುಸೂಧನ ಭಟ್ ಹಾರ್ಮೋನಿಯಂ ಹಾಗೂ ಅರ್ಜುನ ವಠಾರ, ಪ್ರಿಯಾಂಕ ಹಾವೇರಿ ಸಹವಾದ್ಯಗಳಿಗೆ ಸಾಥ್ ನೀಡಿದರು. ಭಾರತೀ ವಿದ್ಯಾಭವನದ ನಿರ್ದೇಶಕಿ ನಾಗಲಕ್ಷ್ಮಿ ರಾವ್ ನಿರೂಪಿಸಿದರು.
2ನೇ ದಿನದ ಪುಲಿಗೆರೆ ಉತ್ಸವದ ಸಂಜೆಯ ಕಾರ್ಯಕ್ರಮದಲ್ಲಿ ಪಂ.ಬಸವರಾಜ ರಾಜಗುರು ಅವರ ಶಿಷ್ಯ, ಹೆಸರಾಂತ ಹಿಂದೂಸ್ಥಾನಿ ಗಾಯಕ ಮತ್ತು ಸಾವಿರಾರು ಸಂಗೀತ ಕಲಾವಿದರನ್ನು ನಾಡಿಗೆ ನೀಡುತ್ತಿರುವ ಹುಬ್ಬಳ್ಳಿಯ ಡಾ. ಪಂ.ಅಶೋಕ ಹುಗ್ಗಣ್ಣವರ ಅವರ ಹಿಂದೂಸ್ಥಾನಿ ಗಾಯನದಿಂದ ಸೇರಿದ್ದ ಸಂಗೀತಾಸ್ತಕರನ್ನು ರಾಗದ ಅಲೆಯಲ್ಲಿ ತೇಲಿಸಿದರು.