ವಿಜಯಸಾಕ್ಷಿ ಸುದ್ದಿ, ರೋಣ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಅವಶ್ಯಕವಾಗಿದ್ದು, ರೋಣದಲ್ಲಿ ತೆರೆಯಲಾಗಿರುವ ತರಬೇತಿ ಕೇಂದ್ರದ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಪಟ್ಟಣದ ಆರ್ಜಿಎಸ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಎಸ್.ಆರ್. ಪಾಟೀಲ ಫೌಂಡೇಷನ್ ವತಿಯಿಂದ ತೆರೆಯಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನೇಕ ವಿದ್ಯಾರ್ಥಿಗಳಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎನ್ನುವ ಹಂಬಲ ಇರುತ್ತದೆ. ಆದರೆ ಅವರಿಗೆ ಬಡತನ ಅಡ್ಡಿ ಬರುತ್ತದೆ. ಹೀಗಾಗಿ, ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಒಳ್ಳೆಯ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನುರಿತ ತಜ್ಞರಿಂದ 60 ದಿನಗಳ ಕಾಲ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಈ ತರಬೇತಿಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಎನ್.ಎಂ. ಬಿರಾದಾರ ಮಾತನಾಡಿ, ಕೆಲವೇ ದಿನಗಳಲ್ಲಿ 2.400 ವಿದ್ಯಾರ್ಥಿಗಳು ತರಬೇತಿಗೆ ನೋಂದಣಿ ಮಾಡಿಕೊಂಡಿದ್ದು ರಾಜ್ಯದಲ್ಲಿಯೇ ಮೊದಲ ಬಾರಿಯಾಗಿದೆ. ಕಾರಣ ಇಲ್ಲಿಯೂ ಸಹ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂಬ ಭಾವನೆಯನ್ನು ಹೊಂದಿದ್ದಾರೆ ಎನ್ನುವುದು ಅರ್ಥವಾಗುತ್ತದೆ ಎಂದ ಅವರು, ಕಷ್ಟದ ಹಾದಿಯನ್ನು ಸವೆಸಿದಾಗ ಮಾತ್ರ ಸುಖ ಸಿಗಲು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.
ಐ.ಎಸ್. ಪಾಟೀಲ, ಸಿದ್ದಣ್ಣ ದಳವಾಯಿ, ಅಶೋಕ ಮಿರ್ಜಿ, ವಿ.ಆರ್. ಗುಡಿಸಾಗರ, ಸಂಗನಗೌಡ ಪಾಟೀಲ, ಅಂದಪ್ಪ ಬಿಚ್ಚೂರ, ಎಚ್.ಎಸ್. ಸೋಂಪುರ, ಸಿದ್ದಣ್ಣ ಬಂಡಿ, ಬಸವರಾಜ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ, ಪ್ರಭು ಮೇಟಿ, ಮುತ್ತಣ್ಣ ಸಂಗಳದ, ಪಿ.ಬಿ. ಅಳಗವಾಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ತರಬೇತಿಯ ಸಂದರ್ಭದಲ್ಲಿ ಇಸ್ರೋದ ವಿಜ್ಞಾನಿಗಳ ತಂಡದಿಂದಲೂ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯ ಹಾಗೂ ತಾಲೂಕಿನ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕು.
– ಟಿ.ಈಶ್ವರ.