ವಿಜಯಸಾಕ್ಷಿ ಸುದ್ದಿ, ಗದಗ: 119 ವರ್ಷಗಳ ಇತಿಹಾಸ ಹೊಂದಿರುವ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ 20ನೇ ಶಾಖೆಯು ನ. 28ರಂದು ಬೆಳಗ್ಗೆ 11 ಗಂಟೆಗೆ ಎಪಿಎಂಸಿ ರಸ್ತೆಯಲ್ಲಿನ ಮಾನ್ವಿ ಬಿಲ್ಡಿಂಗ್ನಲ್ಲಿ ಪ್ರಾರಂಭವಾಗಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ದೀಪಕ ಪ್ರಭು ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೂತನ ಶಾಖೆಯ ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಕಾಶ ಭೂಮಾ ಹಾಗೂ ಮಹಾರುದ್ರಪ್ಪ ಭೂಸ್ತ ಆಗಮಿಸಲಿದ್ದಾರೆ. ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
1980ರಲ್ಲಿ ಯಲ್ಲಾಪುರದಲ್ಲಿ ಪ್ರಥಮ ಶಾಖೆಯನ್ನು ಆರಂಭಿಸಿತು. ಸದ್ಯ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ 13 ಶಾಖೆಗಳು, ಬೆಂಗಳೂರಿನಲ್ಲಿ 2, ಹುಬ್ಬಳ್ಳಿ, ಹಾವೇರಿ, ಕುಂದಾಪುರ ಮತ್ತು ಮಂಗಳೂರಿನಲ್ಲಿ ತಲಾ 1 ಶಾಖೆ ಹೊಂದಿದೆ. ಆ ಪೈಕಿ 10 ಶಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿರುವುದು ಸಂಸ್ಥೆಯ ಹೆಗ್ಗಳಿಕೆ ಎಂದರು.
ಸದ್ಯ ಬ್ಯಾಂಕ್ ಮಾರ್ಚ್ 2024ರ ಅಂತ್ಯಕ್ಕೆ ಆರ್ಥಿಕ ವರ್ಷದಲ್ಲಿ 2055 ಕೋಟಿ ರೂ. ಹೊಂದಿದೆ 1245 ಕೋಟಿ ಠೇವಣಿ, 810ಕೋಟಿ ರೂ. ಸಾಲ, 13.75ಕೋಟಿ ರೂ. ನಿರ್ವಹಣಾ ಲಾಭ, 10.29ಕೋಟಿ ನಿವ್ವಳ ಲಾಭ ಗಳಿಸಿ, ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕುಗಳ ಅಗ್ರ 10 ಶ್ರೇಯಾಂಕದಲ್ಲಿ ಒಂದಾಗಿದೆ ಎಂದು ವಿವರಿಸಿದರು.
ವಿಶಾಲ ದೇವಿಮನಿ, ಅಶ್ವಿನಕುಮಾರ ಖಾಡಿಲಕರ, ದಿನೇಶ ಪಾಲನಕರ, ವಸಂತಿ ಬಸ್ತಿಕರ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



