ವಿಜಯಸಾಕ್ಷಿ ಸುದ್ದಿ, ಮುಳಗುಂದ : ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ಸತತ ಪ್ರಯತ್ನಶೀಲರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಗದಗ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಪ್ರಶಾಂತ ಮೇರವಾಡೆ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ಕಲಾ ಭವನದಲ್ಲಿ ಎಸ್ಜೆಜೆಎಂ ಸಂಯುಕ್ತ ಪದವಿಪೂರ್ವ ಮಾಹಾವಿದ್ಯಾಲಯದ 2024/25ನೇ ಸಾಲಿನ ಪಠ್ಯೇತರ ಚಟುವಟಿಕೆಗಳು, ಎನ್ಎಸ್ಎಸ್ನ ವಿವಿಧ ಸಾಂಘಿಕ ಚಟುವಟಿಕೆಗಳು ಹಾಗೂ ಪ್ರೊಜೆಕ್ಟರ್ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ. ಸಮಾಜ ಸೇವೆಗಾಗಿ ಎನ್ಎಸ್ಎಸ್ ಶಿಬಿರ ಸಹಕಾರಿಯಾಗುವುದರಿಂದ ಪ್ರತಿಯೊಂದು ಚಟುವಟಿಕೆಗಳಲ್ಲಿ ಮಕ್ಕಳು ಬಾಗವಹಿಸಬೇಕು. ಇದರಿಂದ ಕೌಶಲ್ಯ, ವ್ಯಕ್ತಿತ್ವ, ಛಲ ಬೆಳವಣಿಗೆಯಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಲಲೀಲಾ ಮಾಹಾಂತ ಶಿವಯೋಗಿ ಶಿಕ್ಷಣ ಸಮಿತಿಯ ಚೇರಮನ್ ಎಂ.ಡಿ. ಬಟ್ಟೂರ ಮಾತನಾಡಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಪ್ರೊಜೆಕ್ಟರ್ ಕೊಠಡಿ, ಉತ್ತಮ ಶಾಲಾ ಕೊಠಡಿಗಳು, ಗ್ರಂಥಾಲಯ, ವಿಶಾಲವಾದ ಆಟದ ಮೈದಾನ, ಕಂಪ್ಯೂಟರ್ ಶಿಕ್ಷಣ, ಉತ್ತಮ ಶಿಕ್ಷಕ ವೃಂದವನ್ನು ಹೊಂದಿದ್ದು, ಇವುಗಳನ್ನು ಮಕ್ಕಳು ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡು ಶಾಲೆಗೆ ಕೀರ್ತಿ ತನ್ನಿ ಎಂದರು.
ಉಪಾಧ್ಯಕ್ಷ ವಿ.ಎಸ್. ನೀಲಗುಂದ, ಡಾ. ಎಸ್.ಸಿ. ಚವಡಿ, ಪಿ.ಎ. ವಂಟಕರ, ಎನ್.ಆರ್. ದೇಶಪಾಂಡೆ, ಎಂ.ಎಂ. ಅದರಗುಂಚಿ, ಎಸ್.ಸಿ. ಕುರ್ತಕೋಟಿ, ಎಫ್.ಎಸ್. ಅಮೋಘಿಮಠ, ಎಂ.ಎಂ. ಬಡ್ನಿ, ಪ್ರಾಚಾರ್ಯ ಇ.ಎಂ. ಗುಳೆದಗುಡ್ಡ, ಎ.ಎಂ. ಅಂಗಡಿ, ವಿದ್ಯಾರ್ಥಿ ಪ್ರತಿನಿಧಿ ಗಂಗಮ್ಮಾ ಅವ್ವಣ್ಣವರ, ವ್ಹಿ.ಪಿ. ಪರಸಪ್ಪನವರ, ಸಾಗರ ಹೊರಕೇರಿ, ಡಿ.ಐ. ಅಣ್ಣಿಗೇರಿ, ಸಂಜನಾ ಪತ್ರಿ ಇದ್ದರು.