ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಬೆಳಕಾಗಿದೆ. ಸಮಾಜದ ಕಟ್ಟಕಡೆಯ ಮಗುವಿಗೂ ಖಾಸಗಿ ಶಾಲೆಗಳಲ್ಲಿ ಸಿಗುವ ಸಕಲ ಸೌಲಭ್ಯಯುತ, ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗಬೇಕೆಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ತಾಲೂಕಿನ ಕುಂದ್ರಳ್ಳಿ ತಾಂಡಾದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿವೇಕ ಕೊಠಡಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಆ ಮನೋಭಾವನೆ ಹೋಗಬೇಕು, ಆಳುವ ಎಲ್ಲ ಸರ್ಕಾರಗಳು ಮಕ್ಕಳಿಗೆ ಉಚಿತ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನ ನೀಡುತ್ತಾ ಬಂದಿವೆ. ಎಲ್ಲ ಪಾಲಕರು, ಮಕ್ಕಳು ಸರ್ಕಾರಿ ಶಾಲೆಯಯತ್ತ ಗಮನಹರಿಸಬೇಕು. ಪಾಲಕರು ಮಕ್ಕಳನ್ನು ಶಾಲೆಗೆ ತಪ್ಪದೇ ಕಳುಹಿಸಬೇಕು. ಪ್ರಾಥಮಿಕ ಶಾಲಾ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಕ್ಕರೆ ಮಕ್ಕಳ ಶೈಕ್ಷಣಿಕ ಸಾಧನೆಗೆ ಮುನ್ನುಡಿಯಾಗುತ್ತದೆ. ಕ್ಷೇತ್ರದಲ್ಲಿ ಶಾಲೆಗಳ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ ಎಂದರು.
ಈ ವೇಳೆ ಶಾಲೆಯ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಶಾಸಕರಿಗೆ ಶಾಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮನವಿ ಸಲ್ಲಿಸಿದರು. ಈ ವೇಳೆ ಡಿಡಿಪಿಐ ಎಂ.ಎ. ರಡ್ಡೇರ, ಬಿಇಓ ಎಚ್.ಎನ್. ನಾಯಕ, ಮಹೇಶ ಲಮಾಣಿ, ಈಶ್ವರಪ್ಪ ರಾಠೋಡ, ಶಾಂತವ್ವ ಹಡಪದ, ಮಲ್ಲವ್ವ ತಳವಾರ, ಬಸವರಾಜ ಲಮಾಣಿ, ಹಬಸೆಪ್ಪ ಲಮಾಣಿ, ರಮೇಶ ಲಮಾಣಿ, ಸಂತೋಷ ಲಮಾಣಿ ಸೇರಿ ಗ್ರಾಮದ ಹಿರಿಯರು, ಪಾಲಕರು ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕರಾದ ಆರ್.ಎಸ್. ಅರಮನಿ ಪ್ರಾಸ್ತಾವಿಕ ನುಡಿದರು. ಶಿಕ್ಷಕರಾದ ಎಸ್.ವಿ. ಸೋಗಿ, ಬಿ.ಎಂ. ಸರವಿ ನಿರ್ವಹಿಸಿದರು.