ಅಡಿಲೇಡ್ ಓವಲ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸೋತಿದೆ. ಈ ಮೂಲಕ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಇದು ಮಾತ್ರವಲ್ಲದೆ ಬರೋಬ್ಬರಿ 17 ವರ್ಷಗಳ ಬಳಿಕ ಅಡಿಲೇಡ್ ಮೈದಾನದಲ್ಲಿ ಟೀಂ ಇಂಡಿಯಾ ಸೋಲಿಗೆ ಕೊರಳೊಡ್ಡಿದೆ. ಇನ್ನೂ ಪಂದ್ಯದ ನಂತರ ನಾಯಕ ಶುಭ್ಮನ್ ಗಿಲ್ ತಂಡದ ಸೋಲಿಗೆ ಕಾರಣವೇನು ಎಂದು ತಿಳಿಸಿದ್ದಾರೆ.
ಎರಡನೇ ಏಕದಿನ ಪಂದ್ಯವನ್ನು ಎರಡು ವಿಕೆಟ್ಗಳಿಂದ ಗೆದ್ದ ಆಸ್ಟ್ರೇಲಿಯಾ ಸರಣಿಯಲ್ಲಿ ಸರ್ವತೋಮುಖ ಪ್ರದರ್ಶನದೊಂದಿಗೆ ಅಜೇಯ ಮುನ್ನಡೆ ಸಾಧಿಸಿತು. ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಏಳು ವಿಕೆಟ್ಗಳಿಂದ ಸೋತಿತ್ತು. 78 ಎಸೆತಗಳಲ್ಲಿ ಅದ್ಭುತ 74 ರನ್ ಗಳಿಸಿದ ಮ್ಯಾಥ್ಯೂ ಶಾರ್ಟ್ ಅವರ ಒಂದು ಅವಕಾಶ ಸೇರಿದಂತೆ ಭಾರತೀಯ ಫೀಲ್ಡರ್ಗಳು ಕನಿಷ್ಠ ಮೂರು ಅವಕಾಶಗಳನ್ನು ತಪ್ಪಿಸಿಕೊಂಡರು.
“ನಾವು ಉತ್ತಮ ಪ್ರಮಾಣದ ರನ್ಗಳನ್ನು ಗಳಿಸಿದ್ದೆವು. ಆದರೆ ನೀವು ಆ ರೀತಿಯ ಸ್ಕೋರ್ ಅನ್ನು ರಕ್ಷಿಸಿಕೊಂಡು ನಂತರ ಕೆಲವು ಅವಕಾಶಗಳನ್ನು ಕಳೆದುಕೊಂಡಾಗ ಗೆಲುವು ಎಂದಿಗೂ ಸುಲಭವಲ್ಲ ಎಂದು ಹೇಳಿದರು. ಕ್ಯಾಚ್ಗಳನ್ನು ಕೈಬಿಟ್ಟ ಕಾರಣ ಮತ್ತು ಸಾಕಷ್ಟು ರನ್ ಗಳಿಸಲು ಸಾಧ್ಯವಾಗದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ತಮ್ಮ ತಂಡ ಕಳೆದುಕೊಂಡಿತು ಎಂದು ಒಪ್ಪಿಕೊಂಡಿದ್ದಾರೆ.



