ಬೆಂಗಳೂರು: ಭಾರತದಲ್ಲಿ ಮತಾಂಧತೆ ಮತ್ತು ಸಾಮೂಹಿಕ ನರಮೇಧಕ್ಕೆ ಬಹಳ ದೀರ್ಘವಾದ ಇತಿಹಾಸ ಇದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಬ್ರಿಟಿಷರ ಆಳ್ವಿಕೆ ಕಾಲದಲ್ಲೇ ಮಾಪ್ಲಾ ದಂಗೆ ನಡೆದಿತ್ತು. ಕೇರಳದ ಮಲಬಾರ್ನಲ್ಲಿ ಇದು ಆಗಿತ್ತು ಎಂದು ವಿವರಿಸಿದರು. ನರಮೇಧಕ್ಕೆ ತುತ್ತಾದವರು ಹಿಂದೂಗಳು ಎಂದರು.
ಪಶ್ಚಿಮ ಬಂಗಾಲದಲ್ಲಿ ನೇರ ಕಾರ್ಯಾಚರಣೆ ಹೆಸರಿನಲ್ಲಿ ದೊಡ್ಡ ನರಮೇಧ ನಡೆದಿತ್ತು. ಸ್ವಾತಂತ್ರ್ಯಾನಂತರ ರಜಾಕಾರರ ಚಳವಳಿ ಹೆಸರಿನಲ್ಲಿ ನಡೆದಿದ್ದೂ ನರಮೇಧವೇ ಎಂದು ತಿಳಿಸಿದರು. ಇವತ್ತಿನ ಎಐಸಿಸಿ ಅಧ್ಯಕ್ಷರ ಕುಟುಂಬದವರೂ ಸಂತ್ರಸ್ತರಾಗಿತ್ತು ಎಂದು ಹೇಳಿದರು. ಅವರು ತಾಯಿ, ಸಹೋದರಿಯನ್ನು ಕಳಕೊಳ್ಳಬೇಕಾಗಿತ್ತು. ಸ್ವಾತಂತ್ರ್ಯಾನಂತರ ದೇಶದ ಉದ್ದಗಲಕ್ಕೆ ಸಾವಿರಾರು ಬಾಂಬ್ ಸ್ಫೋಟ ನಡೆದಿತ್ತು ಎಂದು ನೆನಪಿಸಿದರು.
ಅದರಲ್ಲಿ ಶೇ 90ರಷ್ಟು ಇಸ್ಲಾಂ ಸಿದ್ಧಾಂತದಿಂದ ಪ್ರಚೋದನೆ ಪಡೆದ ಭಯೋತ್ಪಾದಕರು; ಶೇ 10 ರಷ್ಟು ಮಾವೋ ಮತ್ತು ಕಾರ್ಲ್ ಮಾಕ್ರ್ಸ್ ಸಿದ್ಧಾಂತದಿಂದ ಪ್ರಚೋದನೆ ಪಡೆದ ಭಯೋತ್ಪಾದಕರು. ಇದೆಲ್ಲದರ ಉದ್ದೇಶ ಹಿಂಸೆ, ನರಮೇಧ, ಭೀತಿ ಉಂಟು ಮಾಡುವುದು. ಆ ಭಯದ ಮೂಲಕ ಭಾರತವನ್ನು ಮಣಿಸುವ ಷಡ್ಯಂತ್ರದ ಭಾಗವಾಗಿಯೇ ನಡೆದಿದೆ ಎಂದು ತಿಳಿಸಿದರು.


