ಶಿವಮೊಗ್ಗ: ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಇಂಡಿಗೋ ಸಂಸ್ಥೆ ಶಿವಮೊಗ್ಗ–ಬೆಂಗಳೂರು ನಡುವಿನ ತನ್ನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಿದೆ.
ಏಪ್ರಿಲ್ 30ರಂದು ಮಧ್ಯಾಹ್ನ 2:30ಕ್ಕೆ ಕೊನೆಯ ಹಾರಾಟ ನಡೆದಿದ್ದು, ಕೇವಲ 33 ತಿಂಗಳಲ್ಲೇ ಈ ಸೇವೆ ಅಂತ್ಯಗೊಂಡಿದೆ. 2023ರ ಆಗಸ್ಟ್ 11ರಂದು ಆರಂಭಗೊಂಡ ಈ ಸೇವೆ ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದ ಜನರಿಗೆ ದೊಡ್ಡ ಅನುಕೂಲವಾಗಿತ್ತು. ಈ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ಸೇವೆಯನ್ನು ಬಳಸಿಕೊಂಡಿದ್ದರು. ಇದೀಗ ಸಂಸ್ಥೆಯ ವೆಬ್ಸೈಟ್ನಲ್ಲಿ ಶಿವಮೊಗ್ಗ–ಬೆಂಗಳೂರು ಮಾರ್ಗದ ಟಿಕೆಟ್ ಬುಕ್ಕಿಂಗ್ ಕೂಡ ಸ್ಥಗಿತಗೊಳಿಸಲಾಗಿದೆ.
ಹಾರಾಟ ಸ್ಥಗಿತಕ್ಕೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗಿದೆ. ಉಡಾನ್ ಯೋಜನೆಯಡಿ ನಿರೀಕ್ಷಿತ ಸೌಲಭ್ಯಗಳ ಕೊರತೆ, ಡಿಜಿಸಿಎ ಹೊಸ ನಿಯಮಗಳಿಂದ ಪೈಲಟ್ ಹಾಗೂ ಸಿಬ್ಬಂದಿ ಅಭಾವ ಉಂಟಾಗಿರುವುದು ಪ್ರಮುಖ ಕಾರಣಗಳಾಗಿವೆ.
ಇದಲ್ಲದೆ, ರಾಜ್ಯ ಸರ್ಕಾರದೊಂದಿಗೆ ಮಾಡಿದ್ದ ಒಪ್ಪಂದದ ಪ್ರಕಾರ ಪ್ರತಿ ಟಿಕೆಟ್ಗೆ 500 ರೂ. ಸಹಾಯಧನ ನೀಡಲಾಗುತ್ತಿತ್ತು. 2025ರ ಆಗಸ್ಟ್ನಲ್ಲಿ ಒಪ್ಪಂದ ಮುಕ್ತಾಯಗೊಂಡಿದ್ದು, ಅದರ ನವೀಕರಣ ವಿಳಂಬವಾಗಿರುವುದೂ ಹಾರಾಟ ನಿಲ್ಲಿಸಲು ಕಾರಣವಾಗಿದೆ.
ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಸಂಪೂರ್ಣವಾಗಿಲ್ಲ. ಮಳೆಗಾಲದಲ್ಲಿ ಲ್ಯಾಂಡಿಂಗ್ ಸಮಸ್ಯೆಗಳು ಮತ್ತು ಹಾರಾಟ ರದ್ದಾಗುವ ಸಾಧ್ಯತೆಗಳನ್ನೂ ಸಂಸ್ಥೆ ಉಲ್ಲೇಖಿಸಿದೆ.
ಒಟ್ಟಾರೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಯಾಣಿಕರಲ್ಲಿ ನಿರಾಸೆ ಮೂಡಿಸಿದೆ.



