ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸರಕಾರ ಖರೀದಿಸಿರುವ ಜಮೀನುಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಮುಂಬರುವ 15 ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಸೂಚಿಸಿದರು.
ಅವರು ಶನಿವಾರ ಶಿರಹಟ್ಟಿಯ ತಾ.ಪಂ ಕಚೇರಿಯಲ್ಲಿ ಕಂದಾಯ, ಪಿಆರ್ಇಡಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಶಿರಹಟ್ಟಿ ತಾಲೂಕಿನಲ್ಲಿಯ ಛಬ್ಬಿ ಗ್ರಾ.ಪಂ ವ್ಯಾಪ್ತಿಯ ಛಬ್ಬಿ ಗ್ರಾಮದಲ್ಲಿ 218, ಗುಡ್ಡದಪೂರ ಗ್ರಾಮದಲ್ಲಿ 116, ವಡವಿ ಗ್ರಾ.ಪಂನ ಬೆಳಗಟ್ಟಿ ಗ್ರಾಮದಲ್ಲಿ 97, ಕೊಂಚಿಗೇರಿ ಗ್ರಾಮದ 132, ಮಜ್ಜೂರ ಗ್ರಾಮದ 104, ಪರಸಾಪೂರದ 119 ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಶೀಘ್ರವೇ ವಿತರಿಸಬೇಕು. ಇದಕ್ಕೆ ಯಾವುದೇ ತಾಂತ್ರಿಕ ಕಾರಣಗಳನ್ನು ನೀಡದೇ ಫಲಾನುಭವಿಗಳಿಗೆ ನಿಯಮಾನುಸಾರ ಹಕ್ಕುಪತ್ರ ತಲುಪಿಸುವ ಕೆಲಸವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸವನ್ನು ಸಂಪೂರ್ಣಗೊಳಿಸಬೇಕು.
ಸಂಬಂಧಿಸಿದ ಗ್ರಾ.ಪಂ ಪಿಡಿಓಗಳು ಶೀಘ್ರದಲ್ಲಿಯೇ ಹಕ್ಕುಪತ್ರ ಪಡೆಯುವ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ತಾಲೂಕು ಪಂಚಾಯಿತಿಗೆ ತಲುಪಿಸಬೇಕು. ಇದರಲ್ಲಿ ಯಾವುದೇ ಲೋಪದೋಷವಾದರೆ ಸಂಬಂಧಿಸಿದವರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದರು.
ಶಿರಹಟ್ಟಿ ತಹಸೀಲ್ದಾರ ಅನಿಲ ಬಡಿಗೇರ, ತಾ.ಪಂ ಇಓ ಆರ್.ವಿ. ದೊಡ್ಡಮನಿ, ಪಿಡಿಓಗಳು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.