ವಿಜಯಸಾಕ್ಷಿ ಸುದ್ದಿ, ಧಾರವಾಡ: ಭಾರತದಲ್ಲಿ ಸನಾತನ ಧರ್ಮವು ಉಳಿದು, ಬೆಳೆದು ಬರಲು ಆದಿ ಜಗದ್ಗುರು ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ. ಶಂಕರಾಚಾರ್ಯರಿಂದ ನಮ್ಮ ಸನಾತನ ಸಂಸ್ಕೃತಿ, ಧರ್ಮ ಉಳಿದಿದೆ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಅಖಂಡ ಭಾರತವನ್ನು ಸುತ್ತಿ, ಧರ್ಮ ಪ್ರಚಾರದ ಮೂಲಕ ಒಂದುಗೂಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.
ಅವರು ಶುಕ್ರವಾರ ಸಂಜೆ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ತತ್ವಜ್ಞಾನಿಗಳ ದಿನಾಚರಣೆ ಅಂಗವಾಗಿ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರು ಮತ್ತು ತತ್ವಜ್ಞಾನಿಗಳಲ್ಲಿ ಒಬ್ಬರಾದ ಆದಿ ಜಗದ್ಗುರು ಶಂಕರಾಚಾರ್ಯರ ವಿಚಾರಧಾರೆಗಳು, ಸಾಮಾಜಿಕ ಸುಧಾರಣೆಗಳು ಮತ್ತು ಧಾರ್ಮಿಕ ಸುಧಾರಣೆಗಳ ತತ್ವಗಳನ್ನು ಭಾರತೀಯರು ಅನುಸರಿಸುವಂತೆ ಮಾಡಿ, ಏಕತೆಯ ದೃಷ್ಟಿಯಿಂದ ಭಾರತಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರು ಅದ್ವೈತ ಸಿದ್ಧಾಂತ ಮತ್ತು ಉಪನಿಷತ್ತಿನ ಅರ್ಥವನ್ನು ದೇಶಾದ್ಯಂತ ಪ್ರಚಾರ ಮಾಡಿದರು. ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಶಾರದಾ ಪೀಠಗಳನ್ನು ಸ್ಥಾಪಿಸಿದವರು. ಇಂತಹ ಮಹಾತ್ಮರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಶಾಲಾ ಪಠ್ಯಗಳ ಮೂಲಕ ತಿಳಿಸುವುದು ಬಹು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಧಾರವಾಡ ಸಾಹಿತಿ ಡಾ. ಭಾರತಿ ಹೆಗಡೆ ಅವರು ಶ್ರೀ ಶಂಕರಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಹೆಚ್.ವಿ. ಡಂಬಳ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಹಾಗೂ ವಕೀಲ ಆರ್.ಡಿ. ಕುಲಕರ್ಣಿ, ಆಲೂರ ವೆಂಕಟರಾವ್ ಟ್ರಸ್ಟ್ನ ಸದಸ್ಯ ಡಾ. ದೀಪಕ ಆಲೂರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ ಭೋವಿ, ಮಾಜಿ ಮಹಾಪೌರ ಪೂರ್ಣಾ ಪಾಟೀಲ ವೇದಿಕೆಯಲ್ಲಿದ್ದರು.
ವಿದೂಷಿ ಅಂಜಲಿ ಮೆಹೆಂದಳೆ ಮತ್ತು ವೃಂದದವರು ಹಾಗೂ ವೀಣಾ ಕದರಮಂಡಲಗಿ ಮತ್ತು ವೃಂದದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೋಟ್ಟರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಪ್ರಮುಖರು, ಶಂಕರಾಚಾರ್ಯರ ಅನುಯಾಯಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಹೆಬ್ಬಳ್ಳಿಯ ಶ್ರೀ ಬ್ರಹ್ಮ ಚೇತನ್ಯ ಆಶ್ರಮದ ದತ್ತಾವಧೂತರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಭಾರತದಲ್ಲಿ ಜನಿಸಿದವರು. ಅವರು ಅತ್ಯಂತ ಪ್ರಮುಖ ವೇದಾಂತ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಶಂಕರಾಚಾರ್ಯರು ಅದ್ವೈತ ವೇದಾಂತ ತತ್ವವನ್ನು ಬೋಧಿಸಿ, ಏಕಮೇವಾದ್ವಿತೀಯಂ ಎಂಬ ತತ್ವವನ್ನು ಸಾರಿದರು. ಅವರು ಬೋಧಿಸಿದ ತತ್ವವು ಜ್ಞಾನ, ಭಕ್ತಿ ಮತ್ತು ಧ್ಯಾನದ ಮಹತ್ವವನ್ನು ಒತ್ತಿ ಹೇಳುತ್ತವೆ ಎಂದು ಹೇಳಿದರು.