ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿ.ಪಂ ಗದಗ ಮತ್ತು ಕೃಷಿ ಇಲಾಖೆ ಲಕ್ಷ್ಮೇಶ್ವರ ಇವುಗಳ ಆಶ್ರಯದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 ಜಲಾನಯನ ಮಹೋತ್ಸವ, ತಾಲೂಕು ಮಟ್ಟದ ಜಲಾನಯನ ಮಹೋತ್ಸವ ಅಭಿಯಾನ ಕಾರ್ಯಕ್ರಮವು ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಗುರುವಾರ ನೆರವೇರಿತು.
ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗ್ರಾಮದ ಪ್ರಾಥಮಿಕ ಶಾಲೆಯ ಹತ್ತಿರದ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸಲು ಮಳೆಯಾಶ್ರಿತ ಒಣ ಭೂಮಿಯ ದೊಡ್ಡ ಪ್ರದೇಶಗಳನ್ನು ಜಲಾನಯನ ವ್ಯವಸ್ಥೆಯಡಿಯಲ್ಲಿ ತರಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಜಲಾನಯನ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ಗದಗ ಜಿಲ್ಲೆಯಲ್ಲಿಯೇ ಲಕ್ಷ್ಮೇಶ್ವರ ಕ್ಷೇತ್ರದಲ್ಲಿ ಪ್ರಥಮವಾಗಿ ಪ್ರಾರಂಭಿಸಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಗದಗ ಜಿಲ್ಲಾ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಣ್ಣು, ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಲಕ್ಷ್ಮೇಶ್ವರ ತಾಲೂಕು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಮಹೋತ್ಸವಕ್ಕೆ ಆಯ್ಕೆಯಾಗಿದ್ದು, ಸುಮಾರು 9 ಗ್ರಾಮಗಳ 6 ಸಾವಿರ ಎಕರೆ ಪ್ರದೇಶದಲ್ಲಿ, ಮಳೆ ನೀರು ಕೊಯ್ಲು, ಹರಿಯುವ ನೀರು ತಡೆಗಟ್ಟುವದು, ನೀರು ಇಂಗಿಸುವದು ಸೇರಿದಂತೆ ಈ ಯೋಜನೆಯಡಿ ರೈತರ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ತಳಹದಿಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಾಮಿತ್ವದಲ್ಲಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳ ಬದ್ದಗಳ ಮೇಲೆ ಸಸಿಗಳನ್ನು ನೆಡುವ ಮೂಲಕ ಮತ್ತಷ್ಟು ಭೂಸಾರ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಮೂರು ವರ್ಷಗಳ ಈ ಯೋಜನೆ ಅನುಷ್ಠಾನಗೊಂಡಾಗ ಈ ಭಾಗದ ರೈತರು ಆರ್ಥಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಬದಲಾವಣೆ ಕಾಣಲಿದ್ದಾರೆ ಎಂದು ಹೇಳಿದರು.
ಕೆವಿಕೆ ಹುಲಕೋಟಿ ವಿಷಯ ತಜ್ಞ ನಾರಾಯಣ ಬಂಡಿ ಉಪನ್ಯಾಸ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಪ್ರೇಮಕ್ಕ ಲಮಾಣಿ ವಹಿಸಿದ್ದರು. ಅತಿಥಿಗಳಾಗಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವೀರೇಂದ್ರ ಪಾಟೀಲ, ಹುಲ್ಲೂರ ಗ್ರಾ.ಪಂ ಅಧ್ಯಕ್ಷೆ ಲೀಲಾ ತಳವಾರ, ವೀಣಾ ಅಕ್ಕಿ, ನಿಂಗಪ್ಪ ಬನ್ನಿ, ಜಾನು ಲಮಾಣಿ, ಗಂಗಾಧರ ಮೆಣಸಿನಕಾಯಿ, ಸೋಮಲೆಪ್ಪ ನಾಯಕ, ಜೀವಪ್ಪ ನಾಯಕ್, ಥಾವರೆಪ್ಪ ಲಮಾಣಿ, ಸೀತವ್ವ ಲಮಾಣಿ, ಕೃಷಿ ಅಧಿಕಾರಿಗಳಾದ ಚಂದ್ರಶೇಖರ ನರಸಮ್ಮನವರ, ಪಿ.ಕೆ. ಹೊನ್ನಪ್ಪನವರ ಮುಂತಾದವರು ಇದ್ದರು. ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಸ್ವಾಗತಿಸಿದರು, ಎನ್.ಎನ್. ಶಿಗ್ಲಿ, ಎಚ್.ಎಫ್. ನದಾಫ್ ನಿರೂಪಿಸಿದರು.
ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಮುಖ್ಯ ಉದ್ದೇಶವೆಂದರೆ ಮಣ್ಣು ಮತ್ತು ತೇವಾಂಶವನ್ನು ಸಂರಕ್ಷಿಸುವುದು ಮತ್ತು ಜಲಾನಯನ ಪ್ರದೇಶದ ಒಟ್ಟಾರೆ ಉತ್ಪಾದಕತೆಯನ್ನು ಸಮಗ್ರ ರೀತಿಯಲ್ಲಿ ಸುಧಾರಿಸಲು ಅವುಗಳ ಸಾಮರ್ಥ್ಯಗಳಿಗೆ ಅನುಗುಣವಾಗಿ ಭೂಮಿಯನ್ನು ಉತ್ತಮಗೊಳಿಸುವುದಾಗಿದೆ. ಈ ನಿಟ್ಟಿನಲ್ಲಿ ಜಲ ಸಂರಕ್ಷಣೆ ಮಾಡುವದ ಮೂಲಕ ನಮ್ಮ ಜಲಮೂಲವನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.



