ಹಾವೇರಿ: ಕಬ್ಬಿಗೆ ನಿಗದಿ ಪಡಿಸಿದ ದರವನ್ನು ರೈತರಿಗೆ ಕೊಡಿಸಲು ಸರಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗದಿ ಮಾಡಿರುವ ದರವನ್ನು ಕಾರ್ಖಾನೆ ಮಾಲಿಕರು ಕೊಡುವಂತೆ, ಸರಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ.
ಕಾರ್ಖಾನೆ ಮಾಲೀಕರು ಮುಖ್ಯಮಂತ್ರಿ ಸಭೆಯಲ್ಲಿ ಭಾಗವಹಿಸಿದ್ದರೂ, ಕಾರ್ಖಾನೆ ಮಾಲೀಕರು ಅವರ ಎದರುಗಡೆ ಆಗಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಲಿ. ಕಾರ್ಖಾನೆ ಮಾಲೀಕರಿಗೆ ಕೇವಲ ಹೇಳಿದ್ದಾರೊ ಅಥವಾ ಒಪ್ಪಿಸಿದ್ದಾರೋ ಎಂದು ಸ್ಪಷ್ಟಪರಿಸಲಿ ಎಂದು ಆಗ್ರಹಿಸಿದರು.
ಎಸ್ ಎಪಿ ಜಾರಿ ಮಾಡಲಿ
ರಾಜ್ಯದಲ್ಲಿ ಎಸ್ ಎಪಿ ಕಾನೂನು ಇದೆ. ನಮ್ಮ ಸರಕಾರ ಇದ್ದಾಗ ಮಾಡಿದ್ದೇವೆ. ಎಸ್. ಎ. ಪಿ ಕಾನೂನಿನಲ್ಲಿ ಬಹಳ ಸ್ಪಷ್ಟವಾಗಿದೆ. ಸಕ್ಕರೆ ಮತ್ತು ಇತರೆ ಉತ್ಪಾದನೆಯ ಖರ್ಚುಗಳು ಎಷ್ಟು. ಲಾಭದಲ್ಲಿ ರೈತನಿಗೆ ಎಷ್ಟು ,ಕಾರ್ಖಾನೆ ಎಷ್ಟು ಅನ್ನುವುದು ಇದೆ. ಎಸ್ ಎಪಿ ಕಾನೂನು ತೆಗೆದು ನೋಡಲು ಮುಖ್ಯಮಂತ್ರಿ ತಯಾರಿಲ್ಲ. ಒಂದು ರೀತಿ ಮುಖ್ಯಮಂತ್ರಿ ಖಾಜಿ ನ್ಯಾಯ ಮಾಡಲು ಹೋಗುತ್ತಿದ್ದಾರೆ. ಖಾಜಿ ನ್ಯಾಯ ಮಾಡಲು ಮುಖ್ಯಮಂತ್ರಿನೇ ಬೇಕಾ ಎಂದು ಪ್ರಶ್ನಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ಪ್ರತಿ ಟನ್ ಕಬ್ಬಿಗೆ 2900 ರೂ ಇದ್ದದನ್ನು 3200 ರೂ ಮಾಡಿದ್ದರು. ವಿಧಾನಸೌಧದಲ್ಲಿ ಕುಳಿತು ಮುಖ್ಯಮಂತ್ರಿ 50 ರೂ ಹೆಚ್ಚಳ ಮಾಡಿದರು. ಜಿಲ್ಲಾಧಿಕಾರಿಗೆ ಇರುವ ಬದ್ದತೆ ಮುಖ್ಯಮಂತ್ರಿಗೆ ಇಲ್ವಾ. ಇವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಸರಕಾರ ನಿಗದಿ ಮಾಡಿರುವ ದರವನ್ನು ರೈತರಿಗೆ ಕೊಡಿಸುವುದು ಸರ್ಕಾರದ ಕರ್ತವ್ಯ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಯಾಕೆ ಗಲಾಟೆ ಇಲ್ಲ ಎಂದು ಪ್ರಶ್ನಿಸಿದ ಅವರು, ರಿಕವರಿ ಟೆಸ್ಟ್ ಕೂಡ ಮಾಡುವುದು ರಾಜ್ಯ ಸರಕಾರ. ರಿಕವರಿ ಪರೀಕ್ಷೆಯನ್ನೂ ಕೂಡ ಪಾರದರ್ಶಕವಾಗಿ ಮಾಡಲಿ, ಬೆಳಗಾವಿ ಡಿಸಿ, ಬಿಜಾಪುರ ಡಿಸಿ ಕೆಲಸ ಮಾಡಿದಂತೆ ಹಾವೇರಿ ಡಿಸಿ ಕೆಲಸ ಮಾಡಲಿ, ರಾಜಕೀಯವಾಗಿ ಡಿಸಿಯವರಿಗೆ ಹೇಳುವವರು ಕೇಳುವವರು ಇಲ್ವಾ. ರಾಜ್ಯ ಸರಕಾರಕ್ಕೆ ತೆರಿಗೆ ಬರುತ್ತದೆ, ಆ ಪ್ರಕಾರ ನ್ಯಾಯ ಕೊಡಿಸಲಿ ಎಂದು ಆಗ್ರಹಿಸಿದರು.
ಭ್ರಷ್ಟಾಚಾರದ ಪರಿಣಾಮ
ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳು ಮೊಬೈಲ್ ಬಳಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಯಾವ ರೀತಿ ಇರುತ್ತೆ, ಒಳಗಡೆ ಸಹ ಆ ರೀತಿ ಇರುತ್ತದೆ. ಎಸ್ ಡಿಪಿಐ, ಪಿಎಫ್ ಐ ನವರ ಮೇಲಿನ ಕೇಸ್ ಗಳನ್ನು ಹಿಂಪಡೆದುಕೊಳ್ಳುತ್ತಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಕೇಸ್ ಹಿಂಪಡೆದರೆ, ಇನ್ನು ನೀವು ಏನ್ ಸಂದೇಶ ಕಳಿಸುತ್ತೀರಿ. ಅದಕ್ಕಾಗಿ ಅಂತವರಿಗೆ ಪ್ರೋತ್ಸಾಹ ಸಿಗುತ್ತದೆ. ಮತ್ತೆ ಭ್ರಷ್ಟಾಚಾರ ದಿಂದ ಈ ರೀತಿ ಆಗುತ್ತದೆ. ಜೈಲಿನಿಂದ ಹಿಡಿದು ವಿಧಾನಸೌಧದ 3 ನೇ ಮಹಡಿವರೆಗೂ ಭ್ರಷ್ಟಾಚಾರ ತುಂಬಿ ತುಳಕುತ್ತಿದೆ ಎಂದು ಆರೋಪಿಸಿದರು.


