ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾಯಕ ಮತ್ತು ದಾಸೋಹದ ಮೂಲಕ ಜೀವನದ ಶ್ರೇಯಸ್ಸಿಗೆ ದಾರಿ ತೋರಿದ ಮೂಲ ಪುರುಷರು ಜಗದ್ಗುರು ರೇಣುಕಾಚಾರ್ಯರು. ಧರ್ಮದ ದಶಸೂತ್ರಗಳನ್ನು ಬೋಧಿಸಿ ಜೀವನದ ಉನ್ನತಿಗೆ ಬೆಳಕು ತೋರಿದವರು. ಸತ್ಯ ಮತ್ತು ಶಾಂತಿಯ ತಳಹದಿಯ ಮೇಲೆ ಸುಸಂಸ್ಕೃತ ಸಮಾಜ ನಿರ್ಮಿಸಲು ನಿರಂತರ ಶ್ರಮಿಸಿದ ಶಿವಾದ್ವೈತ ಜ್ಞಾನ ಸಂಪತ್ತನ್ನು ಕರುಣಿಸಿದ ಕಾರುಣ್ಯ ಶಕ್ತಿಯೇ ಪರಮ ಜಗದ್ಗುರುಗಳು ಎಂದು ಪ್ರಭುಗೌಡ ಯಕ್ಕಿಕೊಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿ ಹುಣ್ಣಿಮೆಗೆ ನಡೆಸಿಕೊಂಡು ಬಂದಿರುವ ಪುಲಿಗೆರೆ ಪೌರ್ಣಿಮೆ ಸರಣಿ ಕಾರ್ಯಕ್ರಮದಲ್ಲಿ ಅವರು ಶ್ರೀ ರೇಣುಕಾಚಾರ್ಯರ ಮಹಿಮೆ ವಿಷಯ ಕುರಿತು ಉಪನ್ಯಾಸ ನೀಡಿದರು.
ನಿವೃತ್ತ ಶಿಕ್ಷಕ, ಸಾಹಿತಿ ಎಚ್.ಜಿ. ದುರಗಣ್ಣವರ ಬರೆದ `ಹೋರಾಟಮಯ ಜೀವನ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಮುಖ್ಯೋಪಾಧ್ಯಾಯೆ ಲಲಿತಕ್ಕ ಕೆರಿಮನಿ, ಪ್ರತಿಯೊಬ್ಬರ ಬದುಕಿಗೂ ಒಂದು ಅರ್ಥವಿದೆ, ಗುರಿಯಿದೆ. ಅದನ್ನು ಸಾಧಿಸುವಲ್ಲಿ ಪ್ರತಿಯೊಂದು ಹಂತದಲ್ಲಿಯೂ ಹೋರಾಟ ಮಾಡುವುದು ಮಾನವನ ಸಹಜ ಲಕ್ಷಣ. ಅಂತಹ ಹೋರಾಟ ಜೀವನವನ್ನು ವಿಶ್ರಾಂತ ಶಿಕ್ಷಕ ದುರ್ಗಣ್ಣವರ ಮನಮುಟ್ಟುವ ಹಾಗೆ ದಾಖಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದೇವಣ್ಣ ಬಳಿಗಾರ, ನೀಲಪ್ಪ ಕರ್ಜಕ್ಕಣ್ಣನವರ, ಸುರೇಶ ರಾಚನಾಯ್ಕರ, ವಿರೂಪಾಕ್ಷಪ್ಪ ಆದಿ, ಪಿ.ಬಿ. ಖರಾಟೆ, ಎನ್.ಆರ್. ಸಾತಪೂತೆ, ಮಾಲಾ ದಂದರಗಿ, ಸುಮಾ ಚೊಟಗಲ್, ಎಸ್.ವ್ಹಿ. ಕನೋಜ, ಎಲ್.ಆರ್. ಮಲ್ಲಸಮುದ್ರ, ಎಸ್.ಎ. ಸಾತಣ್ಣನವರ, ಎಂ.ಎನ್. ಭರಮಗೌಡ್ರ, ನಾಗರಾಜ ಕಳಸಾಪೂರ, ಸೋಮಶೇಖರ ಕೆರಿಮನಿ, ಎಂ.ಎಸ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ವಿ.ಎಂ. ಹೂಗಾರ ಪ್ರಾರ್ಥಿಸಿದರು. ಟ್ರಸ್ಟ್ ಕಮಿಟಿ ಸಂಚಾಲಕ ಜಿ.ಎಸ್. ಗುಡಗೇರಿ ಸ್ವಾಗತಿಸಿದರು. ಸ್ನೇಹ ಹೊಟ್ಟಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಈಶ್ವರ ಮೆಡ್ಲೇರಿ ವಂದಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ, ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಮ್ಮಿಕೊಂಡ ಈ ಕಾರ್ಯಕ್ರಮ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಪ ನೋಂದಣಾಧಿಕಾರಿ ಎಸ್.ಕೆ. ಜಲರೆಡ್ಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿದರು. ಸಾಹಿತಿ ಹೆಚ್.ಜಿ. ದುರಗಣ್ಣವರ ತಮ್ಮ ಪುಸ್ತಕದ ಕುರಿತು ಅನುಭವ ಹಂಚಿಕೊಂಡರು.