ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಗಿ ಹುಣ್ಣಿಮೆಯ ದಿನವಾದ ಮೇ.23ರಂದು ಶಿರಹಟ್ಟಿಯ ಕರ್ತೃ ಶ್ರೀ ಜ.ಫಕೀರೇಶ್ವರರ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜ.ಫ. ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಶ್ರೀಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಸಂಪ್ರದಾಯದಂತೆ ಈಗಾಗಲೇ ಮೇ.8ರಂದು ತೇರಿನ ಗಡ್ಡಿ ಹೊರಹಾಕುವುದು, ಕಳಸಾರೋಹಣ ಮಾಡಲಾಗಿದೆ. ಮೇ.18 ಮತ್ತು 19ಕ್ಕೆ ಲಕ್ಷ್ಮೇಶ್ವರ ಮತ್ತು ಮೇ.21ರಂದು ಖಾನಾಪೂರ ಗ್ರಾಮದಲ್ಲಿ ಜಗದ್ಗುರುಗಳಿಂದ ಭಿಕ್ಷಾ ಕಾರ್ಯಕ್ರಮ, ಮೇ.21ರಂದು ಕೋಳಿವಾಡ ದ್ಯಾಮವ್ವದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಮೇ.೨೨ರಂದು ಹರಿಪೂರ ಗ್ರಾಮದಲ್ಲಿ ಭಿಕ್ಷೆ, ಮೇ.೨೩ರಂದು ಹರಿಪೂರದಿಂದ ಶಿರಹಟ್ಟಿ ಪಟ್ಟಣದ ಮ್ಯಾಗೇರಿ ಪಾದಗಟ್ಟಿಯಿಂದ ಉತ್ಸವದ ಮುಖಾಂತರ ಶ್ರೀಮಠಕ್ಕೆ ಬಂದು ಉಚ್ಚಾಯ ಎಳೆಯುವುದು, ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆ ಮತ್ತು ಸಕಲ ವಾದ್ಯಗೋಷ್ಠಿಗಳೊಂದಿಗೆ ಸಂಜೆ 5 ಗಂಟೆಗೆ ಮಹಾರಥೋತ್ಸವ, ನಂತರ ಧರ್ಮಸಭೆ ನೆರವೇರಲಿದೆ.
ಮೇ.2ರಂದು ಸಂಜೆ 5 ಗಂಟೆಗೆ ಕಡುಬಿನ ಕಾಳಗ, ಮೇ.25ರಂದು ಬೆಳಿಗ್ಗೆ 10 ಗಂಟೆಗೆ ಸಂಗೀತ ಕಚೇರಿ, ಮೇ.28ರಂದು ಕಳಸ ಇಳಿಸುವುದು, 9 ಗಂಟೆಗೆ ಜಗದ್ಗುರುಗಳು ಫಕೀರರ ವೇಷದಲ್ಲಿ ನಗಾರಿಖಾನೆಯಲ್ಲಿ ನಮಾಜ್ ಪಠಣ, ಜೂ.6ರಂದು ಅಮವಾಸ್ಯೆ ದಿನ ತೇರಿನ ಗಡಿ ಒಳ ಹಾಕುವ ಕಾರ್ಯಕ್ರಮಗಳು ನೆರವೇರಲಿವೆ. ಈ ಎಲ್ಲ ಕಾರ್ಯಕ್ರಮಗಳು ಶ್ರೀಮಠದ ಸಂಪ್ರದಾಯದಂತೆ ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.