ವಿಜಯಸಾಕ್ಷಿ ಸುದ್ದಿ, ಡಂಬಳ : ಕೃಷಿ ಕಾಯಕ ಅತ್ಯಂತ ಶ್ರೇಷ್ಠವಾಗಿದೆ. ಕೃಷಿ ಕಾಯಕ ಮಾಡುವವರ ತನು-ಮನ-ಭಾವನೆಗಳು ಶುದ್ಧವಾಗಿರುತ್ತವೆ. ಹಾಗಾಗಿಯೇ ಅವರು ಶ್ರೇಷ್ಠರು ಎಂದು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಡಂಬಳ ಗ್ರಾಮದ ಆರಾಧ್ಯ ದೇವರಾದ ಜಗದ್ಗುರು ತೋಂಟದ ಶ್ರೀಮದರ್ಧನಾರಿಶ್ವರರ 284ನೇ ಜಾತ್ರಾಮಹೋತ್ಸವದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ಯ ಶುದ್ಧವಾಗಿರುವ ರೀತಿಯಲ್ಲಿ ಕಾಯಕ ಮಾಡಿದಾಗ ಮಾತ್ರ ಅವರ ಬದುಕು ಉತ್ತಮವಾಗಿರುತ್ತದೆ. ಆ ಹಿನ್ನಲೆಯಲ್ಲಿ ನಮ್ಮ ಗುರುಗಳಾದ ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ತಾವೇ ಸ್ವತಃ ಕೃಷಿಯಲ್ಲಿ ತೊಡಗಿಸಿಕೊಂಡು ಈ ಭಾಗದಲ್ಲಿ ಕೃಷಿಗೆ, ತೋಟಗಾರಿಕೆಗೆ ಆದ್ಯತೆ ನೀಡಿದರು. ಆಧುನಿಕ ಜಗತ್ತಿಗೆ ಕಟ್ಟುಬಿದ್ದಿರುವ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳವುದು ಮತ್ತು ಉತ್ತಮ ಸಂಸ್ಕಾರ ಹೊಂದುವುದು ಮುಖ್ಯ ಎಂದು ಹೇಳಿದರು.
ಹೈದರಾಬಾದ ಸಿಂಹಸನಾರೂಢ ಮಹಾಸ್ವಾಮಿಗಳು ಮಾತನಾಡಿ, ರಥೋತ್ಸವ ಒಗ್ಗಟ್ಟಿಗೆ ಕಾರಣವಾಗಿದೆ. ನಮ್ಮ ಮನಸ್ಸು ಶುದ್ಧವಾಗಬೇಕಾದರೆ ಜಾತ್ರಾ ಮಹೋತ್ಸವಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಶರಣರ, ಗುರು-ಹಿರಿಯರ ಮಾತುಗಳನ್ನು ಆಲಿಸಿದಾಗ ನಮ್ಮನ್ನು ಉತ್ತಮ ಹಾದಿಯಲ್ಲಿ ನಡೆಯುವಂತೆ ಮಾಡುತ್ತವೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಲಿಂ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಈ ಮಠಕ್ಕೆ ಶ್ರೀಗಳಾಗಿ ಬಂದಾಗ ಮಠ ಬಹಳ ತೊಂದರೆಯಲ್ಲಿತ್ತು.
ಅವರ ದೂರದೃಷ್ಟಿಯಿಂದ ಮಠದ ಜಮೀನಿನಲ್ಲಿ ತಾವೇ ಸ್ವತಃ ಬಾವಿಯನ್ನು ತೆಗೆದು ದಾಳಿಂಬೆ, ಮಾವು, ಬಾರಿಹಣ್ಣು ಗಿಡಗಳನ್ನು ಬೆಳೆಯುವುದರ ಮೂಲಕ ಈ ಭಾಗದ ನೂರಾರು ಕೃಷಿಕರಿಗೆ ಪ್ರೇರಣೆಯಾದರು. ಈ ಭಾಗದ ರೈತರು ಹಲವಾರು ಹಣ್ಣಿನ ಗಿಡಗಳ ತೋಟಗಳನ್ನು ಹೊಂದಿದ್ದಾರೆ. ಲಿಂ.ಡಾ.ತೋಂಟದ ಸಿದ್ಧಲಿಂಗಶ್ರೀಗಳು, ಹುಲಗುಡ್ಡ ಏತನೀರಾವರಿ ಮೂಲಕ ನಿಮಗೆ ನೀರು ಬಂದಿದೆ, ನೀರನ್ನು ತುಪ್ಪದಂತೆ ಬಳಸಿ, ತುಪ್ಪವನ್ನು ನೀರಿನಂತೆ ಬಳಸಿ ಎಂದು ರೈತರಿಗೆ ಕಿವಿಮಾತು ಹೇಳಿದ್ದರು ಎಂದರಲ್ಲದೆ, 40 ವರ್ಷದಲ್ಲಿ ನಡೆದು ಬಂದ ದಾರಿಯ ಕುರಿತು ಸುದೀರ್ಘವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್.ಪಾಟೀಲ್, ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಬಸವಂತಪ್ಪ ಪಟ್ಟಣಶೆಟ್ಟರ, ಶಂಕರಗೌಡ ಜಾಯನಗೌಡರ, ಜಾತ್ರಾ ಸಮಿತಿ ಅಧ್ಯಕ್ಷ ಬಸುರಾಜ ಹಮ್ಮಿಗಿ, ಉಪಾಧ್ಯಕ್ಷ ಭೀಮಪ್ಪ ಗದಗಿನ, ಕಾರ್ಯದರ್ಶಿ ಅಶೋಕ ಮಾನೆ, ಖಜಾಂಚಿ ಮಲ್ಲಣ್ಣ ರೇವಡಿ, ಜಾತ್ರಾ ಸಮಿತಿಯ ಸದಸ್ಯರು, ಭಕ್ತರು ಇದ್ದರು.
ಕೆಎಸ್ಎಮ್ಸಿಎಲ್ ಅಧ್ಯಕ್ಷ, ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ಜಾತ್ರಾ ಮಹೋತ್ಸಗಳು ಪ್ರತಿಯೊಬ್ಬರೂ ಉತ್ಕೃಷ್ಟವಾದ ದಾರಿಯಲ್ಲಿ ಸಾಗಲು ಪ್ರೇರಣೆಯಾಗಿವೆ. ಲಿಂ ಡಾ.ತೋಂಟದ ಸಿದ್ದಲಿಂಗ ಶ್ರೀಗಳು ಈ ಭಾಗದಲ್ಲಿ ನೀರಾವರಿಯಾಗುಬೇಕೆನ್ನುವುದು ಮಹದಾಸೆ ಹೊಂದಿದ್ದರು. ಆ ಹಿನ್ನೆಲೆಯಲ್ಲಿ ಇವತ್ತು ನೀರಾವರಿಯಾಗುವುದರ ಮೂಲಕ ರೈತರು ಆರ್ಥಿಕ ಪ್ರವಾಹಿನಿಗೆ ಬರಲು ಕಾರಣವಾಗಿದೆ. ಮುಂದಿನ ದಿನಮಾನಗಳಲ್ಲಿ ಈ ಭಾಗದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.