ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಬಾಗಲಕೋಟೆಯ ಲಡ್ಡುಮುತ್ಯಾ ಅಜ್ಜನವರು ಭೇಟಿ ನೀಡಿ ಸೋಮೇಶ್ವರ ದರ್ಶನ ಪಡೆದು ಭಕ್ತರಿಗೆ ಆಶೀರ್ವಾದ ನೀಡಿದರು.
ಈ ವೇಳೆ ಆಶೀರ್ವಚನ ನೀಡಿದ ಅವರು, ಜಾತ್ರೆ, ಹಬ್ಬ-ಹರಿದಿನಗಳು ಪರಸ್ಪರರಲ್ಲಿ ಸ್ನೇಹ, ಬಾಂಧವ್ಯ, ಸೌಹಾರ್ದತೆ, ನಾವೆಲ್ಲ ಒಂದು ಎಂಬ ಭಾವನೆ ಬೆಸೆಯುತ್ತವೆ. ನಮ್ಮ ದೇಶದಲ್ಲಿ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದ ಧಾರ್ಮಿಕ, ಸಾಂಪ್ರದಾಯಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳು ಮುಂದುವರೆಯಬೇಕು. ಪುಲಿಗೆರೆಯ ಶ್ರೀ ಸೋಮೇಶ್ವರನ ಮಹಿಮೆ ಅಪಾರವಾಗಿದ್ದು, ನಂಬಿದ ಭಕ್ತರ ಇಷ್ಟಾರ್ಥ ಸಿದ್ಧಿಸುವ ಪಾರ್ವತಿ-ಪರಮೇಶ್ವರರೀರ್ವರೂ ನಂದಿ ಮೇಲೆ ಸಂಚಾರ ಹೊರಟಿರುವ ವಿಶೇಷವಾದ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಅಪರೂಪ. ಈ ದೇವಸ್ಥಾನದ ದರ್ಶನ ಜ್ಯೋತಿರ್ಲಿಂಗ ದರ್ಶನದಷ್ಟೇ ಶ್ರೇಷ್ಠ ಎಂದ ಅವರು, ಈ ವರ್ಷ ಉತ್ತಮ ಮಳೆ-ಬೆಳೆ ಲಭಿಸಿ ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿ ಲಭಿಸಲಿ ಎಂದು ಆಶೀರ್ವದಿಸಿದರು.
ಪಟ್ಟಣ ಸೇರಿ ಎಲ್ಲೆಡೆಯಿಂದ ಆಗಮಿಸಿದ್ದ ಭಕ್ತರಿಗೆ ಲಡ್ಡುಮುತ್ಯಾ ಅಜ್ಜನವರು ಆಶೀರ್ವಾದ ನೀಡಿದರು. ಈ ವೇಳೆ ಹಿರಿಯರಾದ ಕುಬೇರಪ್ಪ ಮಹಾಂತಶೆಟ್ಟರ, ಸುರೇಶ ರಾಚನಾಯ್ಕರ, ದಿಗಂಬರ ಪೂಜಾರ, ಬಸವರಾಜ ಮೆಣಸಿನಕಾಯಿ, ರಾಜಶೇಖರ ಶಿಗ್ಲಿಮಠ ಸೇರಿ ಹಲವರಿದ್ದರು.