ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ೩ ದಿನಗಳ ಕಾಲ ಶ್ರೀಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮತ್ತು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಧರ್ಮಜಾಗೃತಿ ಸಮಾರಂಭ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಮಂಗಳವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಕರೆದಿದ್ದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಲಕ್ಷ್ಮೇಶ್ವರ ಮತ್ತು ಮುಕ್ತಿಮಂದಿರಕ್ಕೆ ಅವಿನಾಭಾವ ಸಂಬಂಧವಿದೆ. ಲಿಂ. ಗಂಗಾಧರ ಜಗದ್ಗುರುಗಳೇ ಲಕ್ಷ್ಮೇಶ್ವರ ನನ್ನ ತವರು ಮನೆ ಎನ್ನುತ್ತಿದ್ದರು. ನಾಡಿನ ಎಲ್ಲ ಭಕ್ತರ ಸಹಾಯ-ಸಹಕಾರದಿಂದ ಶ್ರೀ ಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯಾಗಿ ಜಗತ್ಪ್ರಸಿದ್ದಿ ಪಡೆಯಲಿದೆ. ಶ್ರೀ ಮಠದ ಎಲ್ಲ ಕೈಂಕರ್ಯಗಳಲ್ಲಿ ಪಟ್ಟಣದ ಜನತೆಯ ಸಹಕಾರ ಮುಖ್ಯವಾಗಿದೆ. ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ನಡೆಯುವ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಈ ಬಾರಿ ನೊಣವಿನಕೇರಿ ಶ್ರೀಗಳು ಸೇರಿ ಹರಗುರುಚರಮೂರ್ತಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಕೆ. ಪಾಟೀಲ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೇರಿ ಮಂತ್ರಿಗಳು, ಶಾಸಕರು, ನಾಡಿನಾದ್ಯಂತ ಭಕ್ತರು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಹಿರಿಯರಾದ ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ಸಿದ್ದನಗೌಡ ಬಳ್ಳೊಳ್ಳಿ, ಸಿ.ಆರ್. ಲಕ್ಕುಂಡಿಮಠ, ಜಿ.ಎಸ್. ಬಾಳಿಹಳ್ಳಿಮಠ, ವಿಜಯಕುಮಾರ ಹತ್ತಿಕಾಳ, ಮಹೇಶ ಹೊಗೆಸಸೊಪ್ಪಿನ, ವಿರೂಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ನಂದೀಶ ಬಂಡಿವಾಡ, ಶೇಖಪ್ಪ ಹುರಕಡ್ಲಿ, ಶಿವಯೋಗಿ ವಡಕಣ್ಣವರ, ಎಸ್.ಜಿ ಹೂವಿನ, ರಮೇಶ ಹೆಬ್ಬಾಳ ಸೇರಿ ಹಲವರಿದ್ದರು.
ಕ್ಷೇತ್ರದಲ್ಲಿನ ಶಿವಲಿಂಗ ದರ್ಶನ, ಪೂಜೆಗಾಗಿ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸುತ್ತಲಿನ ಜಿಲ್ಲೆಗಳ ಭಕ್ತರಷ್ಟೇ ಅಲ್ಲದೇ ಬೆಂಗಳೂರ, ಶಿವಮೊಗ್ಗ, ಡಾವಣಗೆರೆ, ತುಮಕೂರ, ಬೆಳಗಾವಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಭಕ್ತರು ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಜಾತ್ರಾಮಹೋತ್ಸವದ ಯಶಸ್ಸಿಗೆ ಕೈಜೋಡಿಸಬೇಕು ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.