ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಹಜರತ್ ಮುಹಮ್ಮದ ಪೈಗಂಬರರ ತತ್ವ-ಸಂದೇಶಗಳು ನಮ್ಮ ಜೀವನಕ್ಕೆ ಮಾರ್ಗದರ್ಶನಗಳಾಗಿದ್ದು, ಹೆಸರಿಗೆ ಮಾತ್ರ ಆಚರಣೆಯಾಗದೇ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಗದಗ ಜಿಲ್ಲಾ ವಕ್ಫ ಕಮಿಟಿಯ ಉಪಾಧ್ಯಕ್ಷ ಎಸ್.ಡಿ. ಮಕಾನದಾರ ಅಭಿಪ್ರಾಯಪಟ್ಟರು.
ಇಲ್ಲಿಯ ತಾಡಪತ್ರಿ ಜಮಾತ್ ಮಜೀದ್ ಕಮಿಟಿ ಹಮ್ಮಿಕೊಂಡಿದ್ದ ಮುಹಮ್ಮದ್ ಪೈಗಂಬರರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೈಗಂಬರರು ಈ ಪ್ರಪಂಚ ಅಂಧಕಾರದಲ್ಲಿ ಮುಳುಗಿದಾಗ ದಿವ್ಯ ಜ್ಯೋತಿಯಾಗಿ ಅವತರಿಸಿದರು. ಪೈಗಂಬರರು ಬಸವಾದಿ ಶರಣರಂತೆ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಬಾತೃತ್ವ, ಸ್ನೇಹವನ್ನು ಬೆಳೆಸಲು ಜಾಗೃತಿ ಮೂಡಿಸಿದರು. ಹಿಂದೂ-ಮುಸಲ್ಮಾನರ ಸಾಮರಸ್ಯದ ವೇದಿಕೆಯು ಈ ಕಾರ್ಯಕ್ರಮದಲ್ಲಿ ಕಂಡು ಬಂದಿದ್ದು, ಆಚರಣೆ ಅರ್ಥಪೂರ್ಣವಾಗಿದೆ. ಈ ಶಾದಿ ಮಹಲ್ ಅಭಿವೃದ್ಧಿಗಾಗಿ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರಿಗೆ ಮನವಿ ಸಲ್ಲಿಸಿ 5 ಲಕ್ಷ ರೂಗಳ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಗ್ರಾ.ಪಂ ಸದಸ್ಯ ಬಸವರಾಜ ಯಲಿಶಿರುಂದ ಮಾತನಾಡಿ, ಗ್ರಾ.ಪಂ 15ನೇ ಹಣಕಾಸು ಯೋಜನೆಯಲ್ಲಿ ಅಪೂರ್ಣ ಕಟ್ಟಡಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತಾಡಪತ್ರಿ ಜಮಾತ್ ಮಜೀದ್ ಕಮಿಟಿಯ ಅಧ್ಯಕ್ಷ ಮರ್ದಾನಸಾಬ ದೊಡ್ಡಮನಿ ಮಾತನಾಡಿ, ಅಪೂರ್ಣವಾಗಿರುವ ಶಾದಿ ಮಹಲ್ ಕಟ್ಟಡಕ್ಕೆ ಇನ್ನೂ 25 ಲಕ್ಷ ರೂ ಅವಶ್ಯವಿದ್ದು, ಗ್ರಾಮದ ಗಣ್ಯರು ಸಹಾಯ-ಸಹಕಾರ ನೀಡಬೇಕೆಂದರು.
ಹಜ್ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಬಂದಿರುವ ಅಬ್ದುಲ್ರಪೂಸಾಬ ಯರಗುಡಿ, ಕರೀಮಸಾಬ ಯರಗುಡಿ, ಅಲ್ಲಾಭಕ್ಷಿ ತಾಡಪತ್ರಿ, ಶಮನಸಾಬ ಹಮಸಾಗರ, ಗೂಡುಸಾಬ ತಾಡಪತ್ರಿ, ಫಾರೂಕ ಹಮಸಾಗರ, ಶಫಿವುಲ್ಲಾ ಯರಗುಡಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಮಜೀದ್ ನಿರ್ಮಾಣದ ಭೂಮಿ ಪೂಜೆಯನ್ನು ಮೌಲಾನಾ ಸಲೀಮ ಸಖಾಫಿ ಅವರ ನೇತೃತ್ವದಲ್ಲಿ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.
ಮಕ್ಕಳು ಮುಹಮ್ಮದ್ ಪೈಗಂಬರರ ಜೀವನ ಸಂದೇಶಗಳನ್ನು ಹೇಳಿದರು. ಗ್ರಾ.ಪಂ ಸದಸ್ಯೆ ಹಮೀನಾ ಹುಬ್ಬಳ್ಳಿ, ಜಮಾತ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಂ. ಢಾಲಾಯತ ಸ್ವಾಗತಿಸಿದರು. ಎಂ.ಎA. ಹುಬ್ಬಳ್ಳಿ ನಿರೂಪಿಸಿದರು. ನೂರಹ್ಮದ ಯರಗುಡಿ ವಂದಿಸಿದರು.
ಯುವ ಮುಖಂಡ ವೀರಯ್ಯ ಗಂಧದ ಮಾತನಾಡಿ, ಬಿ.ಆರ್. ಯಾವಗಲ್ ಅವರು ಶಾಸಕರಾಗಿದ್ದಾಗ ಶಾದಿ ಮಹಲ್ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂಗಳ ಅನುದಾನ ಒದಗಿಸಿದ್ದರು. ಈ ಕಟ್ಟಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರಿಗೂ ಸಹ ಮನವಿ ಸಲ್ಲಿಸಲಾಗಿದೆ. ಗ್ರಾಮದಲ್ಲಿ ಹಿಂದೂ-ಮುಸಲ್ಮಾನ ಭಾಂದವರು ಸಾಮರಸ್ಯದಿಂದ ಇದ್ದು ಎಲ್ಲ ಹಬ್ಬಗಳನ್ನೂ ಸ್ನೇಹ ಭಾವದಿಂದ ಆಚರಿಸಲಾಗುತ್ತಿದೆ ಎಂದರು.