HomeEntertainmentಚಿತ್ರರಂಗಕ್ಕೆ ಕಲಾತಪಸ್ವಿ ರಾಜೇಶ್ ಮೊಮ್ಮಗ ಸಾಯಿನಂದ್ ಎಂಟ್ರಿ: ಅದ್ದೂರಿಯಾಗಿ ಸೆಟ್ಟೇರಿದ ‘ಮುಜುಗರ’ ಸಿನಿಮಾ

ಚಿತ್ರರಂಗಕ್ಕೆ ಕಲಾತಪಸ್ವಿ ರಾಜೇಶ್ ಮೊಮ್ಮಗ ಸಾಯಿನಂದ್ ಎಂಟ್ರಿ: ಅದ್ದೂರಿಯಾಗಿ ಸೆಟ್ಟೇರಿದ ‘ಮುಜುಗರ’ ಸಿನಿಮಾ

For Dai;y Updates Join Our whatsapp Group

Spread the love

ತಮ್ಮ ಜನಪ್ರಿಯ ನಟನೆಯ ಮೂಲಕ ಕನ್ನಡಿಗರ ಜನಮನಸೂರೆಗೊಂಡಿದ್ದ ಹಿರಿಯ ನಟ ಕಲಾತಪಸ್ವಿ ರಾಜೇಶ್ ಅವರ ಮೊಮ್ಮಗ ಸಾಯಿನಂದ್   “ಮುಜುಗರ” ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಅಡಿಯಿಟ್ಟಿದ್ದಾರೆ. ಶಾಂತ ಶ್ರೀನಿವಾಸ್ ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ತರುಣ್ ಎನ್ (ಜ್ಯೋತಿಪ್ರಿಯ) ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆಟ್ಟಕಲ್ಲಪ್ಪ ಸರ್ಕಲ್ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಟ ಪ್ರಮೋದ್ ಶೆಟ್ಟಿ ಆರಂಭ ಫಲಕ ತೋರಿದರು. ನಿರ್ಮಾಪಕಿ ಶಾಂತ ಶ್ರೀನಿವಾಸ್ ಕ್ಯಾಮೆರಾ ಚಾಲನೆ ಮಾಡಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ನನಗೂ, ಚಿತ್ರರಂಗಕ್ಕೂ 20 ವರ್ಷಗಳ ನಂಟು. ನಾಗಾಭರಣ, ಅನಂತರಾಜು, ಅಮರ್ ಹಾಗೂ “ಕಂಠಿ” ಭರತ್ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲ ಚಿತ್ರ. “ಮುಜುಗರ” ಕಾಫಿತೋಟದ ಸುತ್ತ ನಡೆಯುವ ಪ್ರೇಮ ಕಥೆ. ರಾಜೇಶ್ ಅವರ ಮೊಮ್ಮಗ ಸಾಯಿನಂದ್ ನಾಯಕನಾಗಿ, ನಿಮಿಷ್ಕ ಹಾಗೂ ತನು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಎರಡನೇ ನಾಯಕನಾಗಿ ಸುಭಾಷ್ ಹಾಗೂ ವಿಲನ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ 15 ರಿಂದ ಸಕಲೇಶಪುರ, ಚಿಕ್ಕಮಗಳೂರು, ಹೊರನಾಡು, ಕಳಸ, ಮಡಿಕೇರಿ ಮುಂತಾದ ಕಡೆಯ ಚಿತ್ರೀಕರಣ ನಡೆಯಲಿದೆ. ಜೈ ಆನಂದ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ತರುಣ್ ಎನ್ (ಜ್ಯೋತಿಪ್ರಿಯ) ತಿಳಿಸಿದರು.

ನಮ್ಮ ಸಂಸ್ಥೆಯಿಂದ “ಎಲ್ಲಿ ಆಡೋದು ನಾವು ಎಲ್ಲಿ ಆಡೋದು” ಎಂಬ ಮಕ್ಕಳ ಚಿತ್ರ ನಿರ್ಮಾಣ ಮಾಡಿದ್ದೆವು. ಆ ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿದೆ. ಇದು ಎರಡನೇ ಚಿತ್ರ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ‌ ಮಾಡುತ್ತಿದ್ದೇವೆ ಎಂದರು ನಿರ್ಮಾಪಕ ಶ್ರೀನಿವಾಸ್.

ನಾನು ನಟನಾಗಲು ನನ್ನ ತಾತ ರಾಜೇಶ್ ಅವರೆ ಸ್ಪೂರ್ತಿ. ಇಂದು ಅವರಿದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಶಾಲೆಯಲ್ಲಿ ಅಭಿನಯದ ಕೋರ್ಸ್ ಕಲಿತಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ.ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ನಾಯಕ ಸಾಯಿನಂದ್ ಧನ್ಯವಾದ ಹೇಳಿದರು.

ನಾನು ಚಿತ್ರದಲ್ಲಿ ನಾನು ಎರಡನೇ ನಾಯಕ ಎಂದರು ಸುಭಾಷ್. ನಾಯಕಿಯರಾದ ನಿಮಿಷ್ಕ, ತನು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಚಿತ್ರದಲ್ಲಿ ಐದು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ತಿಳಿಸಿದರು. ಛಾಯಾಗ್ರಹಣದ ಕುರಿತು ಜೈ ಆನಂದ್ ಮಾತನಾಡಿದರು‌.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!