ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಶಿಕ್ಷಕರು ರಾಜಕಾರಣ ಮಾಡುವುದನ್ನು ಬಿಟ್ಟು ಮಕ್ಕಳಿಗೆ ಉತ್ತಮ ಬೋಧನೆಯ ಕಡೆ ಗಮನವಹಿಸಲಿ ಎಂದು ಶಾಸಕಿ ಲತಾ ಮಲ್ಲಿಕಾರ್ಜುನ ಕಳಪೆ ಫಲಿತಾಂಶದ ಕುರಿತು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ರಾಜೀವ ಗಾಂಧಿ ಸಭಾಂಗಣದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿಯೇ ಹರಪನಹಳ್ಳಿಯು ವಿದ್ಯಾಕಾಶಿ ಎಂದು ಹೆಸರು ಪಡೆದಿರುವು ಸುಮ್ಮನೆ ಅಲ್ಲ. ಪ್ರತಿ ವರ್ಷವೂ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಫಲಿತಾಂಶವು ಉತ್ತಮವಾಗಿ ಇರುತ್ತಿತ್ತು. ಆದರೆ ಈ ಬಾರಿ ಕಳಪೆ ಫಲಿತಾಂಶವಿದ್ದು, ತಾಲೂಕಿನ 16 ಸರ್ಕಾರಿ ಶಾಲೆಗಳಲ್ಲಿ ಅತೀ ಕಡಿಮೆ ಫಲಿತಾಂಶ ಬಂದಿದೆ ಎಂದರು.
ತಾಲೂಕಿನ ಯಾವುದೇ ಸರ್ಕಾರಿ ಆಸ್ಪತ್ರೆ ಗಳಲ್ಲಿ ಸಿಬ್ಬಂದಿಗಳಾಗಲಿ ಅಥವಾ ವೈದ್ಯರಾಗಲಿ ರೋಗಿಗಳನ್ನು ಸರಿಯಾಗಿ ಗಮನಿಸದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಹೆರಿಗೆಗೆಂದು ಆಸ್ಪತ್ರೆಗೆ ಬಂದರೆ ವೈದ್ಯರ ಬದಲಾಗಿ ಅಲ್ಲಿರುವ ಶುಶ್ರೂಷಕಿಯರೆ ಆ ಕೆಲಸವನ್ನು ಹೆಚ್ಚಾಗಿ ನಿಭಾಯಿಸುತ್ತಿದ್ದಾರೆ ಎಂಬ ದೂರುಗಳಿವೆ. ಅಲ್ಲದೆ, ಆಸ್ಪತ್ರೆಗಳಲ್ಲಿ ಔಷಧಿಗಳನ್ನು ನೀಡದೇ ಹೊರಗಡೆ ತೆಗೆದುಕೊಳ್ಳಲು ಬರೆಯುವುದು ಸೂಕ್ತವಲ್ಲ ಎಂದು ಎಚ್ಚರಿಸಿದರು.
ತಹಸೀಲ್ದಾರ ಬಿ.ವಿ. ಗಿರೀಶ್ ಬಾಬು, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಇಓ ವೈ.ಹೆಚ್. ಚಂದ್ರಶೇಖರ, ತಾ.ಪಂ ಸಹಾಯಕ ನಿರ್ದೇಶಕ ಸೋಮಶೇಖರ್ ಯು.ಹೆಚ್, ಟಿಎಚ್ಓ ಹಾಲಸ್ವಾಮಿ, ಬಿಇಓ ಬಸವರಾಜಪ್ಪ, ಕೃಷಿ ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್, ತೋಟಗಾರಿಕೆ ಅಧಿಕಾರಿ ಜಯಸಿಂಹ, ನೀರಾವರಿ ಇಲಾಖಾಧಿಕಾರಿ ಕಿರಣ್ ಕುಮಾರ್ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.